ಸೋಮವಾರಪೇಟೆ: ‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅಭಿಮಾನಿಗಳ ಸಂಘ’ದ ವತಿಯಿಂದ ಪಟ್ಟಣದ ಸಾಕಮ್ಮ ಬಂಗಲೆಯ ಸಮೀಪದ ಮೈದಾನದಲ್ಲಿ ನಡೆದ ‘32ನೇ ರಾಜ್ಯಮಟ್ಟದ ಬೆಳ್ಳಿಬಟ್ಟಲಿನ ಕಬಡ್ಡಿ ಟೂರ್ನಿ’ಯಲ್ಲಿ ಸೋಮವಾರಪೇಟೆಯ ಜಯಕರ್ನಾಟಕ ತಂಡವು ಹೋಟೆಲ್ ಮಿನಿಸ್ಟರ್ ಕೋಟ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಅಂತಿಮ ಪಂದ್ಯದಲ್ಲಿ ಹೋಟೆಲ್ ಮಿನಿಸ್ಟರ್ ಕೋಟ್ಸ್ ತಂಡವನ್ನು 13– 11 ಅಂಕಗಳಿಂದ ಸೋಲಿಸುವ ಮೂಲಕ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನವನ್ನು ಪಡೆಯಿತು. ಸತ್ಯ ಸ್ಪೋರ್ಟ್ಸ್ ಕ್ಲಬ್ ಪಾಂಚಜನ್ಯ ಬಜೆಗುಂಡಿ ತಂಡವನ್ನು ಸೋಲಿಸುವುದರೊಂದಿಗೆ ಮೂರನೇ ಸ್ಥಾನ ಪಡೆಯಿತು.
ಪ್ರೌಢಶಾಲಾ ವಿಭಾಗದ ಕಬಡ್ಡಿ ಟೂರ್ನಿಯಲ್ಲಿ ಬೇಳೂರು ವೀರರಾಜೇಂದ್ರ ಪ್ರೌಢಶಾಲೆಯ ತಂಡ ಪ್ರಥಮ, ಭಗತ್ ಸಿಂಗ್ ತಣ್ಣೀರುಹಳ್ಳ ತಂಡ ದ್ವಿತೀಯ ಸ್ಥಾನ ಪಡೆಯಿತು. ಪ್ರಾಥಮಿಕ ಶಾಲೆಯ ಬಾಲಕರ ವಿಭಾಗದಲ್ಲಿ ಸಿದ್ದಾಪುರ ತಂಡ ಪ್ರಥಮ ಹಾಗೂ ಸೋಮವಾರಪೇಟೆಯ ರಾಕ್ಸ್ಟಾರ್ ತಂಡ ದ್ವಿತೀಯ ಸ್ಥಾನ ಗಳಿಸಿತು.
ಉದ್ಯಮಿ ಹರಪಳ್ಳಿ ರವೀಂದ್ರ ಬಹುಮಾನ ವಿತರಿಸಿದರು. ಟೂರ್ನಿಯಲ್ಲಿ ತೀರ್ಪುಗಾರರಾಗಿ ಸತೀಶ್, ಪ್ರವೀಣ್, ಕೃಷ್ಣ, ಇಸಾಕ್, ಅಜೀಜ್ ಕಾರ್ಯನಿರ್ವಹಿಸಿದರು.
ಕುಶಾಲನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ಬೇಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯೋಗೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯ ಜೀವನ್, ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ್, ಮೊಗೇರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ದಾಮೋದರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೆಬೇಲೂರು ನಿರ್ವಾಣಿ ಶೆಟ್ಟಿ, ಆಟೊ ಚಾಲಕರ ಸಂಘದ ಸದಸ್ಯ ಹಸನಬ್ಬ, ಪ್ರಮುಖರಾದ ಶ್ರೀಧರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.