ಮಡಿಕೇರಿ: ಕೊಡಗು ಜಿಲ್ಲೆಯ ಪ್ರಮುಖ ಹಬ್ಬಗಳಲ್ಲಿ ಒಂದಾದ ‘ಕೈಲ್ ಪೋಳ್ದ್’ ಅನ್ನು ಮಂಗಳವಾರ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.
ಹಲವು ಐನ್ಮನೆಗಳಲ್ಲಿ ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಸೇರಿ ಸಾಂಪ್ರದಾಯಿಕವಾಗಿ ಆಯುಧಗಳನ್ನು ಪೂಜಿಸಿದರು. ಭತ್ತದ ನಾಟಿ ಮುಗಿದ ನಂತರ ಕೃಷಿ ಪರಿಕರಗಳಿಗೆ ಹಾಗೂ ಆಯುಧಗಳಿಗೆ ಶ್ರದ್ಧಾ ಭಕ್ತಿಯಿಂದ ಎಲ್ಲರೂ ಸೇರಿದ ಪೂಜಿಸುವ ವಿಶಿಷ್ಟವಾದ ಈ ಹಬ್ಬದಲ್ಲಿ ಕೇವಲ ಕುಟುಂಬಸ್ಥರು ಮಾತ್ರವಲ್ಲ ಬಂಧುಗಳು, ಸ್ನೇಹಿತರೂ ಪಾಲ್ಗೊಂಡರು.
ಪೂಜೆಯ ನಂತರ ಸಾಂಪ್ರದಾಯಿಕ ತಿನಿಸುಗಳಾದ ಕಡುಬಿಟ್ಟು, ಶ್ಯಾವಿಗೆ, ಪಂದಿಕರಿ ಮೊದಲಾದವುಗಳನ್ನು ಎಲ್ಲರೂ ಕಲೆತು ಸವಿದರು.
ಹಲವೆಡೆ ಸಾರ್ವಜನಿಕವಾದ ಕಾರ್ಯಕ್ರಮಗಳು ನಡೆದವು. ಸಾರ್ವಜನಿಕವಾದ ಪೂಜೆಯ ಜೊತೆಗೆ ವಿವಿಧ ಬಗೆಯ ಕ್ರೀಡೆಗಳನ್ನೂ ಆಯೋಜಿಸಲಾಗಿತ್ತು. ನೂರಾರು ಮಂದಿ ಹಲವು ಆಟೋಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮಕ್ಕಂದೂರು ಗ್ರಾಮದ ಕುಂಭಗೌಡನ ಕುಟುಂಬದ ಐನ್ ಮನೆಯಲ್ಲಿ ಹಬ್ಬದ ಪ್ರಯುಕ್ತ ಕೋವಿ ಮತ್ತು ಲಿಂಗರಾಜ ಅರಸರ ಕಾಲದಲ್ಲಿ ಲಿಂಗರಾಜರ ಚಿನ್ನದ ಮುದ್ರೆ ಹೊಂದಿರುವ ಒಡಿಕತ್ತಿ ಮತ್ತು ಖಡ್ಗಗಳಿಗೆ ಆಯುಧ ಪೂಜೆಯನ್ನು ಕುಟುಂಬದ ಸಮನ್ವಯ ಸಮಿತಿ ಅಧ್ಯಕ್ಷ ಕೆ.ಯು.ರಂಜಿತ್ ನೆರವೇರಿಸಿದರು. ಆಯುಧಗಳಿಗೆ ಪೂಜೆ ಸಲ್ಲಿಸಿದ ನಂತರ ತೆಂಗಿನಕಾಯಿಗಳಿಗೆ ಗುಂಡು ಹೊಡೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.