ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಭಕ್ತರು ಪಿಂಡಪ್ರದಾನ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದ್ದಾರೆ.
ಭಕ್ತಜನರು ತಮ್ಮ ವಾಹನಗಳನ್ನು ಭಾಗಮಂಡಲದಲ್ಲಿ ನಿಲ್ಲಿಸಿ ಪಾದಯಾತ್ರೆಗೆ ಅಣಿಯಾಗುತ್ತಿದ್ದಾರೆ.
ತೀರ್ಥೋದ್ಭವ ಆಗಲಿರುವ ಬ್ರಹ್ಮಕುಂಡಿಕೆಯನ್ನು ವಿವಿಧ ಬಗೆಯ ಹೂಗಳಿಂದ ಸಿಂಗರಿಸಲಾಗಿದೆ.
ಪುಷ್ಕರಣಿ ಸುತ್ತಲೂ ಭಕ್ತರು ಈಗಾಗಲೇ ಸೇರಿದ್ದಾರೆ. ಬಂದ ಯಾತ್ರಿಕರಿಗೆ ಕೊಡಗು ಏಕೀಕರಣ ರಂಗವು ಉಪಾಹಾರದ ವ್ಯವಸ್ಥೆ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.
ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಶುಕ್ರವಾರ ಮಧ್ಯಾಹ್ನ 1.44 ಕ್ಕೆ ಕಾವೇರಿ ತೀರ್ಥೋದ್ಭವ ನಡೆಯಲಿದೆ.
ಮಡಿಕೇರಿ: ತಲಕಾವೇರಿಯ ಪವಿತ್ರ ಕಾವೇರಿ ತೀರ್ಥೋದ್ಭವದಲ್ಲಿ ಭಾಗಿಯಾಗಬೇಕಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಭೇಟಿಯನ್ನು ರದ್ದುಗೊಳಿಸಿದ್ದಾರೆ.
ಹವಾಮಾನ ವೈಪರೀತ್ಯ ಕಾರಣದಿಂದ ಕೊಡಗಿನ ಪ್ರವಾಸ ರದ್ದಾಗಿದೆ ಎಂದು ಪ್ರಕಟಣೆ ತಿಳಿಸಿದೆ
ತಲಕಾವೇರಿ: ಮೊಳಗಿದ ಘೋಷಣೆಗಳು
ಮಡಿಕೇರಿ: ಕಾವೇರಿ ತೀರ್ಥೋದ್ಭವದ ಕ್ಷಣ ಸಮೀಪಿಸುತ್ತಿದ್ದಂತೆ ಮಹಿಳೆಯರು ಸಾಂಪ್ರದಾಯಿಕ ದಿರಿಸಿನಲ್ಲಿ ದೀಪವಿಡಿದು ಬ್ರಹ್ಮಕುಂಡಿಕೆ ಸಮೀಪದ ಕಲ್ಯಾಣಿಯ ಮೆಟ್ಟಿಲುಗಳ ಮೇಲೆ ಕುಳಿತು ಕಾವೇರಿ ಮಾತೆಯ ಹಾಡುಗಳನ್ನು ಹಾಡಿದರು. ಜಯ್ ಜಯ್ ಮಾತೆ ಕಾವೇರಿ ಮಾತೆ ಘೋಷಣೆಗಳನ್ನು ಮೊಳಗಿಸಿದರು.
ಪುರುಷರು ಸಾಂಪ್ರದಾಯಿಕ ದುಡಿಕೊಟ್ ಪಾಟ್ ಹಾಡಿದರು.
ಅರ್ಚಕ ವೃಂದ ಬ್ರಹ್ಮಕುಂಡಿಕೆಗೆ ಪುಷ್ಪಾರ್ಚನೆ ನೆರವೇರಿಸುತ್ತಿದ್ದು, ತಲಕಾವೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಮಧ್ಯಾಹ್ನ 1.44 ಕ್ಕೆ ತೀರ್ಥೋದ್ಭವ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.