ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಹವಾಮಾನ ಇಲಾಖೆಯು ಭಾರಿ ಮಳೆ ಮುನ್ನಚ್ಚರಿಕೆ ನೀಡಿರುವುದರಿಂದ ಜುಲೈ 11ರಂದು (ಸೋಮವಾರ) ಅಂಗನವಾಡಿ ಹಾಗೂ 1ರಿಂದ 10ನೇ ತರಗತಿಯವರೆಗೆ ಮಾತ್ರ ಜಿಲ್ಲಾಡಳಿತ ಭಾನುವಾರ ರಾತ್ರಿ ರಜೆ ಘೋಷಿಸಿದೆ. ಕಾಲೇಜುಗಳಿಗೆ ರಜೆ ನೀಡಿಲ್ಲ.
ಇದಕ್ಕೂ ಮುನ್ನ ರಜೆ ಘೋಷಣೆ ಮಾಡಿರುವ ನಕಲಿ ಆದೇಶದ ಪ್ರತಿಯು ವಾಟ್ಸ್ಆ್ಯಪ್ಗಳಲ್ಲಿ ಸಾಕಷ್ಟು ಹರಿದಾಡಿತ್ತು. ಈ ಕುರಿತು ಪ್ರಕರಣ ದಾಖಲಿಸಲಾಗುವುದು ಹಾಗೂ ರಜೆ ಘೋಷಿಸಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ತಿಳಿಸಿದ್ದರು.
ಆದರೆ, ಮತ್ತೆ ಆದೇಶ ಹೊರಡಿಸಿದ ಅವರು ಅಂಗನವಾಡಿ ಹಾಗೂ 1ರಿಂದ 10ನೇ ತರಗತಿವರೆಗೆ ಮಾತ್ರ ರಜೆ ಘೋಷಿಸಿದ್ದಾರೆ. ಇನ್ನು ಮುಂದೆ ಮಳೆಯ ಪರಿಸ್ಥಿತಿಗೆ ಅನುಗುಣವಾಗಿ ಶಾಲಾ ಹಂತದಲ್ಲೇ ರಜೆ ನೀಡಲು ಆಯಾ ಶಾಲೆಗಳಿಗೆ ಅಧಿಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಈ ಮೊದಲು ಜಿಲ್ಲಾಧಿಕಾರಿ ರಜೆ ಇಲ್ಲ ಎಂದು ಹೇಳಿದ್ದರಿಂದ ಕೆಲವು ಶಾಲೆಗಳು ನಾಳೆ ಶಾಲೆ ಇದೆ ಎಂಬ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಿವೆ. ಇದು ವಿದ್ಯಾರ್ಥಿಗಳು, ಪೋಷಕರಲ್ಲಿ ಗೊಂದಲಕ್ಕೆಡೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.