
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಮಂಗಳವಾರ ಬಾಂಬ್ ನಿಷ್ಕ್ರಿಯ ದಳವು ಶೋಧ ಕಾರ್ಯ ನಡೆಸಿತು
ಮಡಿಕೇರಿ: ನವದೆಹಲಿಯಲ್ಲಿ ಸ್ಫೋಟವಾದ ಬೆನ್ನಲ್ಲೇ ಕೊಡಗು ಜಿಲ್ಲೆಯಲ್ಲೂ ಪೊಲೀಸರು ಅತೀವ ನಿಗಾ ವಹಿಸಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಮಡಿಕೇರಿ ನಗರದಲ್ಲಿ ಮಂಗಳವಾರ ಇಡೀ ದಿನ ಹಲವೆಡೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳವು ತಪಾಸಣಾ ಕಾರ್ಯ ನಡೆಸಿತು. ಒಟ್ಟು 12 ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಹಾಗೂ 4 ಶ್ವಾನಗಳು ತಪಾಸಣಾ ಕಾರ್ಯದಲ್ಲಿ ನಿರತವಾಗಿದ್ದರು. ಅತ್ಯಾಧುನಿಕ ಯಂತ್ರದ ಸಹಾಯದಿಂದ ಸ್ಫೋಟಕ ವಸ್ತುಗಳ ಇರುವಿಕೆ ಕುರಿತು ಶೋಧಿಸಲಾಯಿತು.
ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ ಉದ್ಯಾನದಲ್ಲಿ ಇಂಚಿಂಚನ್ನೂ ಬಿಡದೇ ಈ ತಂಡದ ಸದಸ್ಯರು ಜಾಲಾಡಿದರು. ಹೂಕುಂಡಗಳು, ಕಂಬಗಳು ಸೇರಿದಂತೆ ಎಲ್ಲೆಡೆ ತಪಾಸಣೆ ನಡೆಯಿತು. ನಂತರ, ಕೆಎಸ್ಆರ್ಟಿಸಿ ಬಸ್ನಿಲ್ದಾಣದಲ್ಲೂ ವ್ಯಾಪಕ ಶೋಧ ಕಾರ್ಯ ನಡೆಸಲಾಯಿತು.
ಅನುಮಾನಾಸ್ಪದ ಬ್ಯಾಗುಗಳು, ವ್ಯಕ್ತಿಗಳನ್ನು ತಪಾಸಣೆ ಮಾಡಲಾಯಿತು. ಈ ವೇಳೆ ಯಾವುದೇ ಸ್ಫೋಟಕ ವಸ್ತುಗಳು ಸಿಗಲಿಲ್ಲ.
ಇನ್ನು ಪೊಲೀಸರು ಸಹ ಇದೀಗ ಹಿಂದೆ ಕೊಡಗು ಜಿಲ್ಲೆಯಲ್ಲಿ ನಡೆದಿರುವಂತಹ ಸೂಕ್ಷ್ಮ ಪ್ರಕರಣಗಳನ್ನು ಪುನರ್ ಪರಿಶೀಲಿಸಲಾರಂಭಿಸಿದ್ದಾರೆ. ಅವುಗಳಲ್ಲಿ ಆರೋಪಿಗಳಾಗಿದ್ದ, ಅಪರಾಧಿಗಳಾಗಿದ್ದ ವ್ಯಕ್ತಿಗಳ ಮೇಲೆ ನಿಗಾ ಇಡಲು ನಿರ್ಧರಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ‘ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿರಂತರವಾಗಿ ತಪಾಸಣಾ ಕಾರ್ಯ ನಡೆಸಲಾಗುವುದು. ಈ ಹಿಂದಿನ ಸೂಕ್ಷ್ಮ ಪ್ರಕರಣಗಳ ಆರೋಪಿಗಳ ಕುರಿತೂ ನಿಗಾ ವಹಿಸಲಾಗಿದೆ’ ಎಂದು ಹೇಳಿದರು.
ಕೊಡಗು ಜಿಲ್ಲೆಯಾದ್ಯಂತ ಎಲ್ಲೆಡೆ ನಿಗಾ ವಹಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಶಂಕಿತ ವಸ್ತುಗಳು ಕಂಡು ಬಂದ ಕೂಡಲೇ 112 ಕರೆ ಮಾಡಿ ಮಾಹಿತಿ ನೀಡಬೇಕುಕೆ.ರಾಮರಾಜನ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.