ಮಡಿಕೇರಿ: ‘ಮೈಸೂರು– ಬೆಂಗಳೂರು ದಶಪಥ ಹೆದ್ದಾರಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಪಥ. ಎಚ್.ಡಿ.ದೇವೇಗೌಡ ಅವರಾಗಲಿ, ಕಾಂಗ್ರೆಸ್ ಆಗಲಿ ಒಂದು ರೂಪಾಯಿ ಇದಕ್ಕೆ ಹಣ ಕೊಡಲಿಲ್ಲ. ಈಗ ಯಾರಿಗೋ ಹುಟ್ಟಿದ ಮಗುವನ್ನು ಇವರೆಲ್ಲ ನಮ್ಮ ಮಗು ಎನ್ನುತ್ತಿದ್ದಾರೆ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
‘ಮೊದಲು ಜೆಡಿಎಸ್ ಹಾಗೂ ಕಾಂಗ್ರೆಸ್ ತಮ್ಮ ತಮ್ಮ ಕೂಸುಗಳನ್ನು ಹುಡುಕಿಕೊಳ್ಳಲಿ. ಅದನ್ನು ಬಿಟ್ಟು ಬೇರೆಯವರ ಕೂಸನ್ನು ನಮ್ಮದು ಎನ್ನುವುದು ಬೇಡ’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕುಟುಕಿದರು.
ಇತಿಹಾಸದಲ್ಲಿ ಸಿದ್ದರಾಮಯ್ಯ ಅವರಂತಹ ವ್ಯಕ್ತಿಗಳು ದುಷ್ಟರಂತೆ ಕಾಣಿಸುತ್ತಾರೆ. ಹಿಂದೆ ಅವರು ಹಣೆಗೆ ಕುಂಕುಮ ಇಡುತ್ತಿರಲಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಕುಂಕುಮ ಇಲ್ಲದೇ ಮನೆಯಿಂದ ಅವರು ಹೊರ ಬರುವುದಿಲ್ಲ. ನಾಮಪತ್ರ ಸಲ್ಲಿಸುವಾಗ ದೇಗುಲಕ್ಕೆ ಹೋಗುವ ಅವರು ಅಲ್ಲಿಯವರೆಗೂ ದೇವಾಲಯದ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಬಹಿರಂಗವಾಗಿ ತಾವು ಮುಸ್ಲಿಮರ ಪರ, ಗೋಮಾಂಸ ತಿನ್ನುತ್ತೇವೆ ಎಂದು ಹೇಳಲಿ. ಇಲ್ಲವೇ, ತಾವು ಮುಸ್ಲಿಮರ ವಿರೋಧಿ, ಗೋಮಾಂಸ ತಿನ್ನುವುದಿಲ್ಲ ಎಂದು ಅದನ್ನಾದರೂ ಹೇಳಲಿ. ಇವರ ನಾಟಕವನ್ನು ಅರಿತಿರುವ ಚಾಮುಂಡೇಶ್ವರಿ ಕ್ಷೇತ್ರದ ಜನರು ಇವರನ್ನು ಸೋಲಿಸಿದರು. ಈಗ ಚುನಾವಣೆಗೆ ಸ್ಪರ್ಧಿಸಲು ಅವರು ಕ್ಷೇತ್ರ ಹುಡುಕುತ್ತಿದ್ದಾರೆ. ಧೈರ್ಯವಿದ್ದರೆ ಕೋಲಾರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲಿ ಎಂದೂ ಸವಾಲೆಸೆದರು.
ನಂತರ ನಡೆದ ವಿಜಯಸಂಕಲ್ಪ ಯಾತ್ರೆಯ ರೋಡ್ಶೊನಲ್ಲಿ ಮಾತನಾಡಿದ ಅವರು, ‘ದೇವೇಗೌಡರನ್ನು, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದೀರಿ. ನನಗೂ ಒಂದು ಅವಕಾಶ ಕೊಡಿ ಎಂದು ಡಿ.ಕೆ.ಶಿವಕುಮಾರ್ ಒಕ್ಕಲಿಗರ ಬಳಿ ಅಂಗಲಾಚುತ್ತಿದ್ದಾರೆ. ಕಾಂಗ್ರೆಸ್ ಜಾತಿವಾದಿಗಳನ್ನು ಮುಖ್ಯಮಂತ್ರಿ ಮಾಡಿದರೆ, ಬಿಜೆಪಿ ರಾಷ್ಟ್ರವಾದಿಗಳನ್ನು ಮುಖ್ಯಮಂತ್ರಿ ಮಾಡುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.