ಮಡಿಕೇರಿ: ನಗರ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಬುಧವಾರ ವ್ಯಾಪಕ ಮಳೆಯಾಗಿದ್ದರಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪಿಯು ಮಂಡಳಿ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿತು. ಆದರೆ, ಈ ರಜೆ ಘೋಷಣೆ ತಡವಾಗಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಯಿತು.
ವಿರಾಜಪೇಟೆ ಸೇರಿದಂತೆ ಅನೇಕ ಕಡೆ ಮಂಗಳವಾರ ರಾತ್ರಿಯಿಂದಲೇ ಮಳೆ ಒಂದೇ ಸಮನೆ ಸುರಿಯುತ್ತಿತ್ತು. ಮಡಿಕೇರಿಯಲ್ಲಿ ಭಾರಿ ಪ್ರಮಾಣದ ಗಾಳಿ ಬೀಸುತ್ತಿತ್ತು. ಆದಾಗ್ಯೂ, ಅಧಿಕಾರಿಗಳು ರಜೆ ನೀಡುವಷ್ಟರಲ್ಲಿ ಬಹುತೇಕ ವಿದ್ಯಾರ್ಥಿಗಳು ಮನೆಯಿಂದ ತೆರಳಿದ್ದರು.
ಮಳೆಯಲ್ಲಿ ನೆನೆಯುತ್ತಲೇ ಮನೆಯಿಂದ ಶಾಲೆಗೆ ಬಂದ ವಿದ್ಯಾರ್ಥಿಗಳು ರಜೆ ಎಂದು ತಿಳಿದ ಬಳಿಕ ವಾಪಸ್ ಮನೆಗೆ ತೆರಳಿದರು ಆಗಲೂ ಮಳೆಯಲ್ಲೇ ನೆನೆಯಬೇಕಾಯಿತು. ಕೆಲವು ಕಡೆ ಭಾರಿ ಪ್ರಮಾಣದ ಗಾಳಿ ಬೀಸುತ್ತಿದ್ದುದ್ದರಿಂದ ಕೊಡೆಯನ್ನೂ ಹಿಡಿಯಲಾರದ ಸ್ಥಿತಿ ಇತ್ತು. ಇದರಿಂದ ಅಕ್ಷರಶಃ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು.
ಸೋಮವಾರಪೇಟೆ ತಾಲ್ಲೂಕಿಗೆ ಮಂಗಳವಾರ ರಾತ್ರಿಯೇ ರಜೆ ಘೋಷಣೆ ಮಾಡಿದ್ದರಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿಲ್ಲ.
ಈ ಹಿಂದಿನಂತೆ ಜಿಲ್ಲಾಧಿಕಾರಿಯೇ ರಜೆ ಕೊಡದೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒಪ್ಪಿಸಿದ್ದೇ ಈ ಅವಾಂತರಕ್ಕೆ ಕಾರಣವಾಗಿದೆ ಎಂದು ಬಹುತೇಕ ಪೋಷಕರು ದೂರಿದರು. ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಅಧಿಕಾರಿಗಳ ವಿಳಂಬ ಧೋರಣೆಗೆ ವ್ಯಾಪಕ ಆಕ್ರೋಶ ಕಂಡು ಬಂತು.
ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಬುಧವಾರ ಸಂಜೆಯೇ ಇಡೀ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.