ADVERTISEMENT

ಮಡಿಕೇರಿ: 26 ಗ್ರಾಮಗಳ ಕ್ಷೇತ್ರ ಕಾರ್ಯ ಪೂರ್ಣ

ಜಿಲ್ಲಾ ಮಟ್ಟದ ಕೃಷಿ ಅಂಕಿ ಅಂಶಗಳ ಹಾಗೂ 11 ನೇ ಹಂತದ ಕೃಷಿ ಗಣತಿಯ ಸಮನ್ವಯ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:37 IST
Last Updated 18 ಡಿಸೆಂಬರ್ 2025, 4:37 IST
ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಭೆಯಲ್ಲಿ ಮಾತನಾಡಿದರು
ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಭೆಯಲ್ಲಿ ಮಾತನಾಡಿದರು   

ಮಡಿಕೇರಿ: 11ನೇ ಕೃಷಿ ಗಣತಿಯ 3ನೇ ಹಂತದ ಕ್ಷೇತ್ರ ಕಾರ್ಯಕ್ಕೆ ಆಯ್ಕೆಯಾಗಿದ್ದ ಜಿಲ್ಲೆಯ 26 ಗ್ರಾಮಗಳ ಕ್ಷೇತ್ರ ಕಾರ್ಯ ಪೂರ್ಣಗೊಂಡಿದೆ. ಈ 26 ಗ್ರಾಮಗಳಲ್ಲಿ 558 ಹಿಡುವಳಿದಾರರು ಇದ್ದು, 2,794 ಹೆಕ್ಟೇರ್ ಹಿಡುವಳಿ ಪ್ರದೇಶವಿದೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಕೃಷಿ ಅಂಕಿ ಅಂಶಗಳ ಹಾಗೂ 11ನೇ ಹಂತದ ಕೃಷಿ ಗಣತಿಯ ಸಮನ್ವಯ ಸಮಿತಿ ಸಭೆಯಲ್ಲಿ ಈ ಅಂಶ ಪ್ರಸ್ತಾಪವಾಯಿತು.

ಈ ಮಾಹಿತಿ ನೀಡಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಿ.ನಾರಾಯಣ ಅವರು, ‘2024-25ನೇ ಸಾಲಿನ ಬೇಸಿಗೆ ಋತುವಿನ ಸಿಎಸ್‍ಎಸ್‍ಟಿ ವರದಿಯಂತೆ ಗ್ರಾಮಾವಾರು, ಹೋಬಳಿವಾರು ಪರಿಶೀಲಿಸಿ ವೆಬ್ ತಂತ್ರಾಂಶದಲ್ಲಿ ಮರು ಹೊಂದಾಣಿಕೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ತಾಲ್ಲೂಕು ಮಟ್ಟದ ಕೃಷಿ ಅಧಿಕಾರಿಗಳಿಂದ ದೃಢೀಕರಿಸಿ ಮರು ಹೊಂದಾಣಿಕೆ ಆಧಾರದ ಮೇಲೆ ಜಿಲ್ಲಾ ವರದಿಯನ್ನು ತಯಾರಿಸಿ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ’ ಎಂದು ಹೇಳಿದರು.

ADVERTISEMENT

2025-26ನೇ ಸಾಲಿನ ಮುಂಗಾರು ಋತುವಿನ ಬೆಳೆ ಸಮೀಕ್ಷೆ ಯೋಜನೆಯಡಿ ಜಿಲ್ಲೆಗೆ ಹಂಚಿಕೆಯಡಿ 525 ಗ್ರಾಮಗಳ ಪೈಕಿ 102 ಗ್ರಾಮಗಳಲ್ಲಿ ಸಕಾಲಿಕ ಯೋಜನೆಯಡಿ ಶೇ 1 ರಷ್ಟು ಮುಂಗಾರು ಬೆಳೆ ಸಮೀಕ್ಷೆ ಹಂಚಿಕೆಯಾಗಿದ್ದು, ಸಮೀಕ್ಷೆಯನ್ನು ಸಾಂಖ್ಯಿಕ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಪೂರ್ಣಗೊಳಿಸಲಾಗಿದೆ ಎಂದೂ ಅವರು ತಿಳಿಸಿದರು.

ಪ್ರಸಕ್ತ ಸಾಲಿನ ಹಿಂಗಾರು ಋತುವಿನ ಬೆಳೆ ಸಮೀಕ್ಷೆಯ ತರಬೇತಿ ಕಾರ್ಯ ಪೂರ್ಣಗೊಂಡಿದ್ದು, ಕ್ಷೇತ್ರ ಕಾರ್ಯ ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪಿಎಂ.ಕಿಸಾನ್ ಯೋಜನೆಯಡಿ 299 ರೈತರು ಉಪಯೋಗ ಪಡೆದಿದ್ದಾರೆ. 169 ರೈತರು ಮಣ್ಣಿನ ಆರೋಗ್ಯ ಕಾರ್ಡ್ ಪಡೆದಿದ್ದಾರೆ. ಹಾಗೆಯೇ 349 ಮಂದಿ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ ಎಂದರು.

2025-26ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ, ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ 476 ಬೆಳೆ ಕಟಾವು ಪ್ರಯೋಗಗಳ ಹಂಚಿಕೆಯಾಗಿದ್ದು, ಇವುಗಳ ಪೈಕಿ ಮಳೆಯಾಶ್ರಿತ ಭತ್ತ 336, ನೀರಾವರಿ ಭತ್ತ 20, ಮುಸುಕಿನ ಜೋಳ (ಮಳೆಯಾಶ್ರಿತ) 30 ಪ್ರಯೋಗಗಳ ಹಂಚಿಕೆಯಾಗಿದೆ ಎಂದು ಹೇಳಿದರು.

ಇಳುವರಿಗೆ ಒಳಪಡದ ಬೆಳೆಗಳಲ್ಲಿ ಶುಂಠಿ (ಮಳೆಯಾಶ್ರಿತ) 60 ಪ್ರಯೋಗಗಳು, ಸಿಹಿಗೆಣಸು (ಮಳೆಯಾಶ್ರಿತ) 30 ಪ್ರಯೋಗಗಳು, ಇವುಗಳ ಪೈಕಿ 250 ಪ್ರಯೋಗಗಳು ಪೂರ್ಣಗೊಂಡಿದ್ದು, ಉಳಿದ 226 ಪ್ರಯೋಗಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮುತ್ತಪ್ಪ, ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ವೆಂಕಟೇಶ್, ಬಿ.ಎಂ.ಗಾನವಿ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ನಿರ್ದೇಶನ

2024-25 ನೇ ಸಾಲಿನ ಬೇಸಿಗೆ ಋತುವಿನ ಬೆಳೆ ಕ್ಷೇತ್ರ ಮರು ಹೊಂದಾಣಿಕೆ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದರು. ಬೆಳೆ ಸಮೀಕ್ಷೆ ಪರಿಶೀಲನೆ ಸಂಬಂಧಿಸಿದಂತೆ ಮಾಹಿತಿ ನೀಡುವುದು 11ನೇ ಕೃಷಿ ಗಣತಿಯ ಮೂರನೇ ಹಂತದ ಬಗ್ಗೆ ಮಾಹಿತಿ ಒದಗಿಸುವುದು ಹಾಗೆಯೇ ಪ್ರಸಕ್ತ ಸಾಲಿನ ಬೆಳೆ ಕಟಾವು ಸಂಬಂಧಿಸಿದಂತೆ ನಿಖರ ಮಾಹಿತಿ ಒದಗಿಸುವಂತೆಯೂ ಅವರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.