
ಮಡಿಕೇರಿ: ಇಲ್ಲಿನ ನಗರಸಭೆಯ ಬಜೆಟ್ನ ಪೂರ್ವಭಾವಿ ಸಭೆಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಒಬ್ಬರನ್ನು ಬಿಟ್ಟರೆ ಬೇರೆ ಸಾರ್ವಜನಿಕರು ಇರಲಿಲ್ಲ. ನಗರಸಭೆಯ ಸಿಬ್ಬಂದಿಯೇ ಸಭಿಕರಾಗಿ ಕುಳಿತಿದ್ದರು.
ಈ ದೃಶ್ಯಗಳು ಇಲ್ಲಿನ ಶಿಥಿಲಾವಸ್ಥೆಯಲ್ಲಿರುವ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ನಗರಸಭೆ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಕಂಡು ಬಂತು.
ನಗರದಲ್ಲಿರುವ ಎಲ್ಲ ಸಂಘ, ಸಂಸ್ಥೆಗಳು, ಸಂಘಟನೆಗಳು ಈ ಸಭೆಯಿಂದ ಸಾಮೂಹಿಕವಾಗಿ ದೂರ ಉಳಿದಿದ್ದವು. ನಗರಸಭೆಯ ಮಾಜಿ ಸದಸ್ಯರು ಸಹ ಅಂತರ ಕಾಯ್ದುಕೊಂಡಿದ್ದರು. ಕೆಲವೇ ಕೆಲವು ಹಾಲಿ ಸದಸ್ಯರು ಹಾಜರಾಗಿದ್ದರು. ಹೆಚ್ಚಿನವರು ಗೈರಾಗಿದ್ದರು.
ಸಭೆಗೆ ಬಂದಿದ್ದ ಹಿರಿಯ ಮುಖಂಡರಾದ ಬೈ ಶ್ರೀ ಪ್ರಕಾಶ್ ಅವರು, ನಗರದಲ್ಲಿ ನಡೆದಿರುವ ಅಮೃತ್–2 ಯೋಜನೆಯಿಂದ ನಾಗರಿಕರಿಗೆ ಆಗಿರುವ ತೊಂದರೆಗಳನ್ನು ಕುರಿತು ಸಭೆಯ ಗಮನಕ್ಕೆ ತಂದರು.
ಈ ಕಾವೇರಿ ಕಲಾಕ್ಷೇತ್ರವನ್ನು ಒಡೆಯುವ ಬದಲು ದುರಸ್ತಿ, ನವೀಕರಣ ಮಾಡಿ ಎಂದು ಸಲಹೆ ನೀಡಿದರು. ಜೊತೆಗೆ, ಫಾರಂ–3 ಸರಳೀಕರಣ ಮಾಡಿ ಎಂದು ಮನವಿ ಮಾಡಿದರು.
ನಗರಸಭೆಯ ಅಧ್ಯಕ್ಷೆ ಕಲಾವತಿ, ಪೌರಾಯುಕ್ತ ರಮೇಶ್ ಹಾಗೂ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಸಭೆಯ ಕೆಲವು ಸದಸ್ಯರು ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.