ಶನಿವಾರಸಂತೆ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ಇಲ್ಲಿಗೆ ಸಮೀಪದ ಮಾಲಂಬಿ ಗ್ರಾಮದಲ್ಲಿರುವ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಸಂಜೆವರೆಗೂ ದ ಸಾವಿರಾರು ಭಕ್ತರು ಬೆಟ್ಟ ಹತ್ತಿದರು. ಹಾಸನ ಜಿಲ್ಲೆಯಿಂದ ಬರುತ್ತಿದ್ದ ಭಕ್ತರು ಶನಿವಾರಸಂತೆ-ಬೀಟಿಟೆಕಟ್ಟೆ ಮಾರ್ಗವಾಗಿ, ಮೈಸೂರು-ಕುಶಾಲನಗರ ಕಡೆಯಿಂದ ಆಗಮಿಸುತ್ತಿದ್ದ ಭಕ್ತರು ಬಾಣಾವರ-ಶನಿವಾರಸಂತೆ ಮಾರ್ಗವಾಗಿ ಮಾಲಂಬಿ ಗ್ರಾಮದ ಮೂಲಕ ಬೆಟ್ಟ ಹತ್ತಿದರು.
ಶಿವರಾತ್ರಿ ಹಬ್ಬದ ಪ್ರಯುಕ್ತ ಮಳೆ ಮಲ್ಲೇಶ್ವರ ಸ್ವಾಮಿಗೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಅರ್ಚಕ ಲಿಂಗರಾಜು ನೇತೃತ್ವದಲ್ಲಿ ಬಾಲು ಮತ್ತು ಅರ್ಚಕರ ತಂಡ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಬೆಟ್ಟದ ತದಿಯಲ್ಲಿ ಭಕ್ತರು ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಸಾವಿರಾರು ಭಕ್ತರು ಬೆಟ್ಟವನ್ನೇರಿ ಮಳೆ ಮಲ್ಲೇಶ್ವರ ಸ್ವಾಮಿಯ ದರ್ಶನ ಪಡೆದರು. ಯುವಕರು, ಯುವತಿಯರು, ವಯಸ್ಕರು, ಕಿರಿಯರು, ಮಕ್ಕಳು ಉತ್ಸಾಹದಿಂದ ಬೆಟ್ಟವನ್ನೇರಿ ಸಂಭ್ರಮಪಟ್ಟರು. ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಟ್ಟದ ಕೆಳ ಭಾಗದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಪುಟ್ಟ ಜಾತ್ರೆಯೇ ನಡೆಯಿತು.
ಭಕ್ತಾದಿಗಳಿಗೆ ಅನ್ನಸಂತರ್ಪಣೆ ಇತ್ತು. ದಾರಿ ಮಧ್ಯದಲ್ಲಿ ಭಕ್ತಾಧಿಗಳಿಗೆ ಕುಡಿಯಲು ಮಜ್ಜಿಗೆ, ನೀರು ವಿತರಣೆ ಮಾಡಲಾಯಿತು. 7 ರಿಂದ 8 ಸಾವಿರ ಭಕ್ತಾದಿಗಳು ಬೆಟ್ಟದ ಮೇಲೆ ನಡೆದ ಶಿವರಾತ್ರಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಯುವಕರ ತಂಡ ಭಕ್ತಾದಿಗಳಿಗೆ ಮಜ್ಜಿಗೆ ಮತ್ತು ಕುಡಿಯುವ ನೀರು ವಿತರಣೆ ಮಾಡಿದರು .
ಮಾಲಂಬಿ ಬೆಟ್ಟಕ್ಕೆ ಶನಿವಾರಸಂತೆ, ಕುಶಾಲನಗರ ಕಡೆಯಿಂದ ಬರುತ್ತಿದ್ದ ಕಾರು, ಜೀಪು, ದ್ವಿಚಕ್ರ ವಾಹನ ಮುಂತಾದ ವಾಹನಗಳನ್ನು ಮಾಲಂಬಿ ಗ್ರಾಮದ ಊರೊಳಗೆ ಪೊಲೀಸರು ನಿಲುಗಡೆಗೊಳಿಸಿದ್ದರು. ಪ್ರತಿವರ್ಷ ಗ್ರಾಮದ ಬಸವೇಶ್ವರಸ್ವಾಮಿ ದೇವಸ್ಥಾನದ ಬಳಿ ವಾಹನಗಳನ್ನು ನಿಲುಗಡೆಗೊಳಿಸುತ್ತಿದ್ದರು. ಈ ವರ್ಷ ದ್ವಿಚಕ್ರ ವಾಹನ ಮತ್ತು ಇತರೆ ವಾಹನಗಳು ಹೆಚ್ಚಾಗಿ ಬರುತ್ತಿದ್ದ ಕಾರಣ ಈ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಪೊಲೀಸರು ಗ್ರಾಮದ ಊರೊಳೊಗೆ ವಾಹನಗಳನ್ನು ನಿಲುಗಡೆಗೊಳಿಸಿದರು. ಈ ವರ್ಷ 7 ರಿಂದ 8 ಸಾವಿರಕ್ಕಿಂತ ಹೆಚ್ಚಿನ ಜನರು ಬೆಟ್ಟವನ್ನೇರಿ ದೇವರ ದರ್ಶನ ಪಡೆದಿರುವುದಾಗಿ ದೇವಸ್ಥಾನ ಸಮಿತಿಯವರು ತಿಳಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಮುಖಂಡರಾದ ಎಚ್.ಎಸ್.ವಸಂತ್, ಎಚ್.ವಿ.ದಿವಾಕರ್, ಎಚ್.ವಿ.ಸುರೇಶ್, ಎಚ್.ಕೆ.ಸದಾಶಿವ, ಎಚ್.ಕೆ.ಹಾಲಪ್ಪ, ಎಂ.ವಿ.ವೆಂಕಟೇಶ್, ಚಿದಾನಂದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.