ಸುಂಟಿಕೊಪ್ಪ ಸಮೀಪದ ಪನ್ಯ ಗ್ರಾಮದಲ್ಲಿ ನೆಲೆ ನಿಂತಿರುವ ಗ್ರಾಮ ದೇವತೆ ಮಳೂರು ಬೆಳ್ಳಾರಿಕಮ್ಮ ದೇವರ ವಾರ್ಷಿಕ ಪೂಜೋತ್ಸವವೂ ಸೋಮವಾರ ಶ್ರದ್ಧಾ ಭಕ್ತಿಯಿಂದ ವಿವಿಧ ಪೂಜಾ ಕುಣಿತಗಳೊಂದಿಗೆ ನಡೆಯಿತು
ಸುಂಟಿಕೊಪ್ಪ: ಸಮೀಪದ ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಗ್ರಾಮ ದೇವತೆ ಮಳೂರು ಬೆಳ್ಳಾರಿಕಮ್ಮ ದೇವರ ವಾರ್ಷಿಕ ಪೂಜೋತ್ಸವವು ಸೋಮವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ– ಭಕ್ತಿಯಿಂದ ನಡೆಯಿತು.
ಬೆಳಿಗ್ಗೆ ಮಂದನ ಮನೆಯಿಂದ ಭಂಡಾರವನ್ನು ಮೆರವಣಿಗೆ ಮೂಲಕ ದೇವಾಲಯಕ್ಕೆ ತರುವುದರ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಿತು. ನಂತರ, ಎತ್ತು ಪೋರಾಟ್, ಚೌರಿ ಕುಣಿತ, ಉತ್ಸವ ಮೂರ್ತಿಯ ಕುಣಿತ ನಡೆಯಿತು.
ಈ ಗ್ರಾಮ ದೇವತೆಗೆ ಸಂಬಂಧಿಸಿದ ಉಲುಗುಲಿ ಗ್ರಾಮದ ಪನ್ಯ, ಸುಂಟಿಕೊಪ್ಪ, ಅಂಜನಗೇರಿ ಬೆಟ್ಟಗೇರಿ, ಹರದೂರು ಗ್ರಾಮಸ್ಥರು 7 ದಿನಗಳ ವೃತದಲ್ಲಿದ್ದು, ರಾತ್ರಿ ವೇಳೆ ಚೌರಿ ಮತ್ತೀತರ ಕುಣಿತಗಳ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡು ದೇವಿಗೆ ವಿವಿದ ಪೂಜಾ ಆಚರಣೆಗಳನ್ನು ಕೈಗೊಂಡು ನಂತರ ದೇವಾಲಯದಲ್ಲಿಯೇ ವಾಸ್ತವ್ಯ ಹೂಡಿದ್ದರು.
ಏಳನೇ ದಿನವಾದ ಸೋಮವಾರ ಈ ಗ್ರಾಮಕ್ಕೆ ಸಂಬಂಧಿಸಿದ ಕೊಡವ ಮತ್ತು ಗೌಡ ಸಮುದಾಯದ ಪುರುಷರು, ಯುವಕರು ಕೊಡಗಿನ ಸಾಂಪ್ರದಾಯಿಕ ಉಡುಗೆ, ಕೊಡವರ ಕುಪ್ಪಚಾಲೆ ಮತ್ತು ಗೌಡ ಜನಾಂಗದ ಕುಪ್ಪಸ ದಟ್ಟಿ ಶ್ವೇತ ವರ್ಣದ ಉಡುಪು ಧರಿಸಿ ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವುದರ ಮೂಲಕ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ತಂದು ದೇವರಿಗೆ ಸಮರ್ಪಿಸಿದರು.
ನಂತರ ಗ್ರಾಮದ ಹಿರಿಯರು, ಕಿರಿಯರು ದೇವಾಲಯದ ಸುತ್ತ ಪ್ರದಕ್ಷಿಣೆ ಬಂದು ಈಡುಗಾಯಿ, ಎತ್ತುಪೋರಾಟ್, ಚೌರಿಕುಣಿತದ ಮೂಲಕ ಬೆಳ್ಳಾರಿಕಮ್ಮ ದೇವರ ಉತ್ಸವ ಮೂರ್ತಿಯನ್ನು ಭಕ್ತರ ದರ್ಶನಕ್ಕೆ ಅವಕಾಶ ನೀಡಿದರು.
ದೇವಾಲಯದ ಆವರಣದಲ್ಲಿರುವ ವಸಂತ ಕಟ್ಟೆಯ ಬಳಿ ದೇವರ ಉತ್ಸವ ಮೂರ್ತಿಯ ಪೂಜೆ, ನೃತ್ಯ ಬಲಿ ಮತ್ತು ದರ್ಶನ ಬಲಿ ಎಲ್ಲರ ಗಮನ ಸೆಳೆಯಿತು.
ಆನಂತರ ಮಧ್ಯಾಹ್ನ ದೇವಿಗೆ ವಿಶೇಷ ಪೂಜೆ, ಅಲಂಕಾರಗಳು ನಡೆದು ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಈ ಪೂಜಾ ಕೈಂಕಾರ್ಯಗಳನ್ನು ಹಿರಿಯ ಅರ್ಚಕ ಹಾ.ಮಾ.ಗಣೇಶ ಶರ್ಮಾ, ಮಂಜುನಾಥ್ ಉಡುಪ, ಮಂಜುನಾಥ್ ಶರ್ಮಾ ನೆರವೇರಿಸಿದರು.
ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯದ ಮುಖ್ಯಸ್ಥರಾದ ಪಟ್ಟೆಮನೆ ಸದಾಶಿವ, ಮಾಗಲು ವಸಂತ, ಪಟ್ಟೆಮನೆ ಉದಯಕುಮಾರ್, ಪಟ್ಟೆಮನೆ ಅನಿಲ್ ಕುಮಾರ್, ಪೂವಯ್ಯ, ರಾಕೇಶ್ ಹಾಗೂ ಈ ಗ್ರಾಮಕ್ಕೆ ಸೇರಿದ ಕುಟುಂಬಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.