ADVERTISEMENT

ದೊಣ್ಣೆಯಿಂದ ಹೊಡೆದು ಚಿಕ್ಕಪ್ಪನ ಕೊಲೆ

ಥಳಿಸಿದ್ದ ಆರೋಪಿಯನ್ನು ಬಂಧಿಸಿದ ಶನಿವಾರಸಂತೆ ಠಾಣೆ ಪೊಲೀಸರು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 2:13 IST
Last Updated 10 ಸೆಪ್ಟೆಂಬರ್ 2020, 2:13 IST
ಹಾವುಗೊಲ್ಲರ ಹಾಡಿಯಲ್ಲಿ ಚಿಕ್ಕಪ್ಪನನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ ಆರೋಪಿ ಆನಂದನನ್ನು ಪೊಲೀಸರು ಬಂಧಿಸಿದರು
ಹಾವುಗೊಲ್ಲರ ಹಾಡಿಯಲ್ಲಿ ಚಿಕ್ಕಪ್ಪನನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ ಆರೋಪಿ ಆನಂದನನ್ನು ಪೊಲೀಸರು ಬಂಧಿಸಿದರು   

ಶನಿವಾರಸಂತೆ: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾವುಗೊಲ್ಲರ ಹಾಡಿಯಲ್ಲಿ ಚಿಕ್ಕಪ್ಪನನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ ಆರೋಪಿ ಆನಂದನನ್ನು ಪೊಲೀಸರು ಬುಧವಾರ ಬಂಧಿಸಿದರು.

ಘಟನೆ ವಿವರ: ಆರೋಪಿಯ ತಾಯಿ ಅಕ್ಕಮ್ಮ ಹಾಗೂ ಚಿಕ್ಕಪ್ಪನ ನಡುವಿನ ಅನೈತಿಕ ಸಂಬಂಧವೇ ಹಲ್ಲೆಗೆ ಕಾರಣ ಎನ್ನಲಾಗಿದೆ.

ಪಂಚಾಯಿತಿ ಕಚೇರಿ ಹಿಂಭಾಗ ಹಾವುಗೊಲ್ಲರ ಹಾಡಿಯಿದ್ದು ಅಲ್ಲಿ 24 ಕುಟುಂಬಗಳು ನೆಲೆಸಿವೆ. ಆರೋಪಿ ಆನಂದ ಹಾಗೂ ತಾಯಿ ಅಕ್ಕಮ್ಮ ಒಂದೇ ಜೋಪಡಿಯಲ್ಲಿ ವಾಸಿಸುತ್ತಿದ್ದು 6 ತಿಂಗಳ ಹಿಂದೆ ಚಿಕ್ಕಪ್ಪ ಕೃಷ್ಣ ಇವರ ಮನೆಗೆ ಬಂದು ನೆಲೆಸಿದ್ದರು.

ADVERTISEMENT

ಸೆ. 6ರಂದು ಸಂಜೆ ಕೂಲಿ ಕೆಲಸ ಮುಗಿಸಿ ಆನಂದ ಮನೆಗೆ ಬಂದಾಗ ಚಿಕ್ಕಪ್ಪ ಕೃಷ್ಣ (60) ತಾಯಿಯ ಜೊತೆ ಅನೈತಿಕ ಸಂಬಂಧ ನೋಡಿ ಕೋಪದಿಂದ ಚಿಕ್ಕಪ್ಪನ ಮೇಲೆ ಹಲ್ಲೆ ಮಾಡಿದ್ದನು. ಇದರಿಂದ ಕೈಕಾಲು ಮುರಿದು ಮೈಮೇಲೆ ಬಾಸುಂಡೆ ಬಂದು ನರಳಾಡುತ್ತಿದ್ದರು. ಚಿಕ್ಕಪ್ಪನನ್ನು ಅಕ್ಕಪಕ್ಕದ ಸಂಬಂಧಿಕರು ಉಪಚಾರ ಮಾಡಿದ್ದರು. ಆದರೆ, ಮೂರು ದಿನಗಳಿಂದ ನರಳುತ್ತಿದ್ದ ಕೃಷ್ಣ ಬುಧವಾರ ಮೃತಪಟ್ಟರು.

ಥಳಿಸಿದ್ದನ್ನು ನೋಡಿದ್ದ ಹಾಡಿಯ ಕುಮಾರ, ಶಿವ, ರೂಪಾ ದೂರು ನೀಡಿದ್ದು ಶನಿವಾರಸಂತೆ ಪೊಲೀಸ್ ಠಾಣೆಯ ಪಿಎಸ್ಐ ಎಚ್.ಈ. ದೇವರಾಜ್ ಆರೋಪಿಯನ್ನು ಬಂಧಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಶೈಲೇಂದ್ರ, ಸಿಪಿಐ ಮಹೇಶ್, ಎಎಸ್ಐ ಶಿವಲಿಂಗ, ಸಿಬ್ಬಂದಿ, ಕಂದಾಯ ಪರಿವೀಕ್ಷಕ ನಂದಕುಮಾರ್, ಗ್ರಾಮ ಲೆಕ್ಕಿಗ ಮಂಜುನಾಥ್, ಪಂಚಾಯಿತಿ ಕಾರ್ಯದರ್ಶಿ ತಮ್ಮಯ್ಯಾಚಾರ್ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.