ADVERTISEMENT

ಅಪಹರಣದ ವದಂತಿ: ಬೆಟ್ಟಿಂಗ್ ಕಟ್ಟಿದ್ದ ಯುವತಿಯ ಬಲವಂತವಾಗಿ ಎಳೆದೊಯ್ದ ಸ್ನೇಹಿತರು!

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 16:23 IST
Last Updated 2 ಜೂನ್ 2022, 16:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಡಿಕೇರಿ: ಇಲ್ಲಿನ ಸಂಪಿಗೆಕಟ್ಟೆಯ ಸಮೀಪ ಬುಧವಾರ ಯುವತಿಯೊಬ್ಬರನ್ನು ಬಲವಂತವಾಗಿ ಕಾರಿನಲ್ಲಿ ಎಳೆದೋಯ್ದ ಪ್ರಕರಣ ಸುಖಾಂತ್ಯಗೊಂಡಿದೆ. ಅವರೆಲ್ಲರೂ ಪರಸ್ಪರ ಸ್ನೇಹಿತರಾಗಿದ್ದು, ಮೋಜಿಗಾಗಿ ಬೆಟ್ಟಿಂಗ್‌ ಕಟ್ಟಿದ್ದೇ ಪ್ರಕರಣಕ್ಕೆ ಕಾರಣ ಎಂಬ ವಿಷಯ ತನಿಖೆಯಿಂದ ಗೊತ್ತಾಗಿದೆ.

‘ಮಂಡ್ಯ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಈ ಯುವತಿಯು ತನ್ನ ನಾಲ್ವರು ಸ್ನೇಹಿತರೊಂದಿಗೆ ಮಡಿಕೇರಿಗೆ ಪ್ರವಾಸಕ್ಕಾಗಿ ಬಂದಿದ್ದರು. ಈ ವೇಳೆ ಸ್ನೇಹಿತರೊಂದಿಗೆ ತಾನು ಹಣ ಇಲ್ಲದಿದ್ದರೂ ಊರು ತಲುಪುತ್ತೇನೆ ಎಂದು ಬೆಟ್ಟಿಂಗ್ ಕಟ್ಟಿ, ಕಾರಿನಿಂದಿಳಿದು ಹೊರಟರು. ಸಂಪಿಗೆಕಟ್ಟೆ ಸಮೀಪ ಗೂಗಲ್‌ ಪೇ ಮಾಡಿ ಅಂಗಡಿಯೊಂದರ ಮಾಲೀಕರಿಂದ ₹ 500 ನಗದು ಪಡೆದು, ಬಸ್‌ನಲ್ಲಿ ಹೊರಡಲು ಸಿದ್ಧವಾಗಿದ್ದರು. ಈ ವೇಳೆ ಯುವತಿಯನ್ನು ಹುಡುಕುತ್ತ ಬಂದ ಸ್ನೇಹಿತರು ಆಕೆಯನ್ನು ಎಳೆದೊಯ್ದರು. ಇದು ಸಾರ್ವಜನಿಕರಿಗೆ ಅಪಹರಣದಂತೆ ಕಂಡಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ, ಯುವತಿಯನ್ನು ಬಲವಂತವಾಗಿ ಎಳೆದೊಯ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಯುವತಿಯ ಹೇಳಿಕೆ ಪಡೆಯಲಾಗಿದೆ. ಅಪಹರಣ ಪ್ರಕರಣ ಇದಾಗದೇ ಇರುವುದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.