ADVERTISEMENT

ಹಲಾಲ್‌ ವಿಚಾರ: ಸರ್ಕಾರ ಮಧ್ಯ ಪ್ರವೇಶಿಸುವ ಪ್ರಶ್ನೆ ಇಲ್ಲ: ಸಚಿವ ಬಿ.ಸಿ.ನಾಗೇಶ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 11:10 IST
Last Updated 31 ಮಾರ್ಚ್ 2022, 11:10 IST
ಸಚಿವ ಬಿ.ಸಿ. ನಾಗೇಶ್
ಸಚಿವ ಬಿ.ಸಿ. ನಾಗೇಶ್   

ಮಡಿಕೇರಿ: ‘ಗಂಡಸುತನ ಬೇಕಿರುವುದು ಸರ್ಕಾರ ನಡೆಸುವುದಕ್ಕೆ ಅಲ್ಲ. ಗಂಡಸುತನ ಬೇಕಿರುವುದು ಎಲ್ಲಿಗೆ ಎಂಬುದು ಎಲ್ಲರಿಗೂ ತಿಳಿದಿದೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು, ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಇಲ್ಲಿ ಗುರುವಾರ ತಿರುಗೇಟು ನೀಡಿದರು.

‘ರಾಜ್ಯ ಸರ್ಕಾರ ನಡೆಸುವ ಶಕ್ತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದೆ’ ಎಂದು ಪ್ರತಿಕ್ರಿಯಿಸಿದರು.

‘ಹಲಾಲ್‌ ಸರ್ಕಾರ ಮಾಡಿರುವ ನಿಯಮ ಅಲ್ಲ. ಅದೊಂದು ಸಮುದಾಯದ ಆಚರಣೆ. ಹಲಾಲ್ ಬಗ್ಗೆ ನನಗೂ ತಿಳಿದಿರಲಿಲ್ಲ. ಬೇರೆ ಧರ್ಮದ ಆಚರಣೆ ನಮಗೆ ಏಕೆ ಎಂದು ಸಂಘಟನೆಗಳು ಪ್ರಶ್ನೆಯೆತ್ತಿವೆ. ವ್ಯಕ್ತಿಯ ಸ್ವಾತಂತ್ರ್ಯ ಈ ದೇಶ ನೀಡಿದೆ. ಹಲಾಲ್‌ ಮಾಡಬಾರದು ಗಲಾಟೆ ನಡೆಸಿದ್ದರೆ, ಸರ್ಕಾರ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳುತ್ತಿತ್ತು. ಹಲಾಲ್‌ ಮಾಡಿರುವ ಮಾಂಸವನ್ನು ತಿನ್ನುವುದು ಬೇಡವೆಂದು ಸರ್ಕಾರ ಹೇಳಿಲ್ಲ. ಸರ್ಕಾರ ಮಧ್ಯ ಪ್ರವೇಶಿಸುವ ಪ್ರಶ್ನೆಯೇ ಇಲ್ಲ. ಹಲಾಲ್‌ ಬೇಕು–ಬೇಡ ಎಂಬುದು ಜನರಿಗೆ ಬಿಟ್ಟಿರುವ ವಿಚಾರ’ ಎಂದು ಹೇಳಿದರು.

ADVERTISEMENT

‘ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅವರು ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್‌ ವಿಚಾರವನ್ನು ಕೈಬಿಡುವಂತೆ ಈ ಹಿಂದೆ ಪತ್ರ ಬರೆದಿದ್ದರು. ಪಠ್ಯಪುಸ್ತಕ ಪರಿಷ್ಕರಣೆಯನ್ನು ಸಮಿತಿಗೆ ನೀಡಲಾಗಿದೆ. ಮತ್ತಷ್ಟು ಪುಸ್ತಕಗಳ ಅಧ್ಯಯನ ನಡೆಯುತ್ತಿದೆ. ಎಲ್ಲ ಆಯಾಮದಲ್ಲೂ ಪರಿಶೀಲಿಸಿ ಸತ್ಯವಲ್ಲದ ಮಾಹಿತಿಯನ್ನು ಪಠ್ಯದಿಂದ ಕೈಬಿಡಲಾಗುವುದು’ ಎಂದು ಶಿಕ್ಷಣ ಸಚಿವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.