ಕುಶಾಲನಗರ: ಪುರಸಭೆ ವ್ಯಾಪ್ತಿಯ ಬೈಚನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಕನ್ನಂಬಾಡಮ್ಮ ದೇವಸ್ಥಾನಕ್ಕೆ ₹20 ಲಕ್ಷ ಅನುದಾನ ಕೊಡಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಡಾ.ಮಂತರ್ ಗೌಡ ಭರವಸೆ ನೀಡಿದರು.
ಇಲ್ಲಿನ ಬೈಚನಹಳ್ಳಿ ಗ್ರಾಮದ ಗ್ರಾಮದೇವತೆ ಕನ್ನಂಬಾಡಮ್ಮ ದೇವಾಲಯದ ನೂತನ ಗರ್ಭಗುಡಿ ನಿರ್ಮಾಣಕ್ಕಾಗಿ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ದೇವಾಲಯಗಳು ಮನುಷ್ಯನಿಗೆ ಶಾಂತಿ ನೆಮ್ಮದಿ ನೀಡುವ ಸುಂದರ ತಾಣಗಳು. ದೇವಾಲಯ ನಿರ್ಮಾಣಕ್ಕೆ ಪ್ರತಿಯೊಬ್ಬರು ಜಾತಿ ಧರ್ಮ ಮೀರಿದ ಸಹಾಯ ಸಹಕಾರ ನೀಡಬೇಕು. ಸರ್ಕಾರದ ಅನುದಾನದ ಜೊತೆಗೆ ವಯುಕ್ತಿಕವಾಗಿಯೂ ಸಹಾಯ ಮಾಡುವುದಾಗಿ ಶಾಸಕರು ಹೇಳಿದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ದಶಕಗಳ ಹಿಂದೆ ಬೈಚನಹಳ್ಳಿ ಯಲ್ಲಷ್ಟೇ ಜನವಸತಿ ಇತ್ತು. ಕ್ರಮೇಣ ಊರು ಆಧುನಿಕತೆಯತ್ತ ತೆರೆದುಕೊಂಡಿತು. ಈ ಗ್ರಾಮದಲ್ಲಿ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ದೇವಾಲಯಕ್ಕೆ ಹೊಸ ರೂಪ ಕೊಡಲು ಈ ಹಿಂದೆ ಮಾಡಿದ ಯೋಜನೆಗಳೆಲ್ಲಾ ವ್ಯರ್ಥವಾದ ಬಗೆಯನ್ನು ಸ್ಮರಿಸಿದರು. ಇದೀಗ ದೇವಾಲಯ ನಿರ್ಮಾಣ ನಿರ್ವಿಘ್ನವಾಗಿ ಸಾಗಲಿ ಎಂದರು.
ಕನ್ನಂಬಾಡಮ್ಮ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಸ್.ಶಿವಕುಮಾರ್, ಉಪಾಧ್ಯಕ್ಷ ಡಿ. ಶ್ರೀಕಾಂತ್, ಪುರಸಭೆ ಸದಸ್ಯ ಬಿ.ಎಲ್. ಜಗದೀಶ್, ಕೋಶಾಧಿಕಾರಿ ಕೆ.ಪಿ.ಉಮೇಶ್, ನಿರ್ದೇಶಕರಾದ ಶ್ರೀಮಂತ, ಬಿ.ಆರ್.ಮಣಿಕಂಠ, ಗಣೇಶ, ಆರ್.ಮಂಜುನಾಥ್, ಎಸ್.ಮಂಜು, ಪ್ರಮುಖರಾದ ಕೆ.ಎನ್.ಅಶೋಕ್, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ, ಕೂಡ ಅಧ್ಯಕ್ಷ ಪ್ರಮೋದ್, ಮಾಜಿ ಅಧ್ಯಕ್ಷ ಮಂಜುನಾಥ ಗುಂಡೂರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಬಿ.ಬಿ.ಭಾರತೀಶ್, ಎನ್.ಎನ್.ಶಂಭುಲಿಂಗಪ್ಪ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ದೇವಾಲಯದ ಗರ್ಭಗುಡಿ ನಿರ್ಮಾಣದ ಸ್ಥಳದಲ್ಲಿ ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಗಿರೀಶ್ ಭಟ್, ಉಮೇಶ್ ಭಟ್, ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಭೂವರಹ ಶಾಂತಿ ಹೋಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.