ADVERTISEMENT

ದೊಡ್ಡಮಳ್ತೆ ಗ್ರಾಮ: ತಾಯಿ– ಮಗಳ ಬರ್ಬರ ಹತ್ಯೆ; ಆಸ್ತಿ ವೈಷ್ಯಮದಿಂದ ಕೊಲೆ ಶಂಕೆ

ಮೂವರು ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 13:49 IST
Last Updated 30 ಏಪ್ರಿಲ್ 2019, 13:49 IST
ಕವಿತಾ, ಪುತ್ರಿ ಜಗಶ್ರೀ
ಕವಿತಾ, ಪುತ್ರಿ ಜಗಶ್ರೀ    

ಸೋಮವಾರಪೇಟೆ (ಕೊಡಗು ಜಿಲ್ಲೆ): ಆಸ್ತಿ ವೈಷಮ್ಯಕ್ಕೆ ತಾಯಿ-ಮಗಳನ್ನು ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ದೊಡ್ಡಮಳ್ತೆ ಗ್ರಾಮದ ದಿವಂಗತ ವೀರರಾಜು ಅವರ ಪತ್ನಿ ಕವಿತಾ (45) ಹಾಗೂ ಅವರ ಪುತ್ರಿ ಜಗಶ್ರೀ (17) ಕೊಲೆಯಾದವರು. ಇಬ್ಬರಿಗೂ ಕೈ ಹಾಗೂ ತಲೆಯ ಭಾಗಕ್ಕೆ ಗಂಭೀರವಾಗಿ ಹಲ್ಲೆ ನಡೆಸಿದ್ದರ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತೋಟಕ್ಕೆ ತೆರಳಿದ್ದವರು ಮನೆಗೆ ಬಾರದಿದ್ದ ಕಾರಣ ತನ್ನ ತಾಯಿಯ ಮೊಬೈಲ್‌ಗೆ ಪುತ್ರ ಮೇಘಮದನ್ ರಾಜ್ ಕರೆ ಮಾಡಿದ್ದಾನೆ. ಮೊಬೈಲ್ ಸ್ವಿಚ್ಡ್‌ಆಫ್ ಆಗಿದ್ದರಿಂದ ತೋಟದ ಬಳಿ ತೆರಳಿ ನೋಡಿದಾಗ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ.

ADVERTISEMENT

ಘಟನೆಗೆ ಆಸ್ತಿ ವೈಷಮ್ಯವೇ ಕಾರಣ ಎನ್ನಲಾಗಿದೆ. ಈ ಹಿಂದೆ ಆಸ್ತಿಗೆ ಸಂಬಂಧಿಸಿದಂತೆ ಇವರೊಂದಿಗೆ ಗಲಾಟೆ ನಡೆಸುತ್ತಿದ್ದ ಸ್ಥಳೀಯ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮೃತಪಟ್ಟ ಜಗಶ್ರೀ ಹಾಸನದ ಸಂತ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ರಜೆಯಿದ್ದ ಕಾರಣ ಮನೆಗೆ ಬಂದಿದ್ದರು. ಪುತ್ರ ಮೇಘಮದನ್ ರಾಜ್ ವೀರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್, ಸೋಮವಾರಪೇಟೆ ಡಿವೈಎಸ್ಪಿ ದಿನಕರ್ ಶೆಟ್ಟಿ, ಪಿಎಸ್‌ಐ ನಂಜುಂಡೇಗೌಡ, ಪಿಎಸ್‌ಐ ಶಿವಶಂಕರ್ ತೆರಳಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿಯೇ ಶ್ವಾನ ದಳವಿದ್ದರೂ ಯಾವುದೇ ಪರಿಶೀಲನೆ ನಡೆಸದೇ ಮೃತದೇಹ ಸ್ಥಳಾಂತರಿಸಲು ಮುಂದಾದ ಪೊಲೀಸರ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳದಲ್ಲಿ ಶ್ವಾನದಳದಿಂದ ತಪಾಸಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.