ಮಡಿಕೇರಿ: ರಾಜ್ಯದ ಗಡಿಭಾಗದಲ್ಲಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ನಕ್ಸಲ್ ನಾಯಕ ರೂಪೇಶ್ನನ್ನು ಮಂಗಳವಾರ ಇಲ್ಲಿನ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಕೇರಳ ಹಾಗೂ ಕೊಡಗು ಜಿಲ್ಲೆಯ ನಕ್ಸಲ್ ನಿಗ್ರಹ ಪಡೆಯ ಭದ್ರತೆಯಲ್ಲಿ ಸೋಮವಾರ ಸಂಜೆ ಕರೆತಂದು ಸಮೀಪದ ಕರ್ಣಂಗೇರಿಯ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಮಂಗಳವಾರ 10.30ರ ಸುಮಾರಿಗೆ ನ್ಯಾಯಾಧೀಶ ವೀರಭದ್ರಪ್ಪ ವಿ. ಮಲ್ಲಾಪುರೆ ಅವರ ಎದುರು ರೂಪೇಶ್ನನ್ನು ಹಾಜರು ಪಡಿಸಲಾಯಿತು. ಬಳಿಕ ಏ.10ಕ್ಕೆ ವಿಚಾರಣೆ ಮುಂದೂಡಲಾಯತು. ಕೋರ್ಟ್ ಆವರಣಕ್ಕೆ ರೂಪೇಶ್ ಬರುತ್ತಿದ್ದಂತೆಯೇ ನಕ್ಸಲ್ ಪರ ಹಾಗೂ ಇತ್ತೀಚೆಗೆ ಕೇರಳದಲ್ಲಿ ನಡೆದಿದ್ದ ಪೊಲೀಸ್ ಹಾಗೂ ನಕ್ಸಲ್ ನಡುವಿನ ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದ ಜಲೀಲ್ ಪರವಾಗಿಯೂ ಘೋಷಣೆ ಕೂಗಿದ.
ಯಾವೆಲ್ಲಾ ಆರೋಪ?: 2010ರಲ್ಲಿ ಕೊಡಗು ಜಿಲ್ಲೆಯ ಕಾಲೂರು, ಪರಕಟಗೇರಿ ಹಾಗೂ 2013ರಲ್ಲಿ ಭಾಗಮಂಡಲ ಸಮೀಪದ ಚೇರಂಬಾಣೆಯಲ್ಲಿ ರೂಪೇಶ್ ನೇತೃತ್ವದ ತಂಡ ಪ್ರತ್ಯಕ್ಷವಾಗಿತ್ತು. ಹಲವು ಮನೆಗಳಿಗೆ ಭೇಟಿ ನೀಡಿ ಆಹಾರ ಪದಾರ್ಥ ಸಂಗ್ರಹ ಹಾಗೂ ನಕ್ಸಲ್ ಪರವಾದ ಕರಪತ್ರ ಹಂಚಿಕೆ ಮಾಡಿದ್ದ ಆರೋಪ ಕುರಿತು ಶ್ರೀಮಂಗಲ ಹಾಗೂ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ, ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.