ADVERTISEMENT

ವನ್ಯಜೀವಿ ಮಾಫಿಯಾದಲ್ಲಿ ಹೊಸ ಮುಖಗಳು!

ಆರು ತಿಂಗಳಿನಲ್ಲಿ 65 ಮಂದಿ ಸಿಐಡಿ‍ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳ ಬಲೆಗೆ

ಕೆ.ಎಸ್.ಗಿರೀಶ್
Published 21 ಅಕ್ಟೋಬರ್ 2022, 6:57 IST
Last Updated 21 ಅಕ್ಟೋಬರ್ 2022, 6:57 IST
ಕುಶಾಲನಗರ ಸಮೀಪದ ಮರೂರು ಗ್ರಾಮದಲ್ಲಿ ಸಿಐಡಿ ‍ಪೊಲೀಸ್ ಅರಣ್ಯ ಘಟಕದ ಪೊಲೀಸರು ಈಚೆಗೆ ವಶಪಡಿಸಿಕೊಂಡ ಹುಲಿ ಉಗುರು, ಹಲ್ಲು, ಚರ್ಮ
ಕುಶಾಲನಗರ ಸಮೀಪದ ಮರೂರು ಗ್ರಾಮದಲ್ಲಿ ಸಿಐಡಿ ‍ಪೊಲೀಸ್ ಅರಣ್ಯ ಘಟಕದ ಪೊಲೀಸರು ಈಚೆಗೆ ವಶಪಡಿಸಿಕೊಂಡ ಹುಲಿ ಉಗುರು, ಹಲ್ಲು, ಚರ್ಮ   

ಮಡಿಕೇರಿ: ವನ್ಯಜೀವಿಗಳು ಹಾಗೂ ಅವುಗಳ ಅಂಗಾಂಗಗಳನ್ನು ಮಾರಾಟ ಮಾಡುವ ಮಾಫಿಯಾದಲ್ಲಿ
ಹೊಸಬರೇ ಹೆಚ್ಚಿರುವುದು ಪೊಲೀಸರನ್ನು ಅಚ್ಚರಿಗೆ ದೂಡಿದೆ. ನಿರುದ್ಯೋಗ, ಬಡತನದ ಜೊತೆಗೆ ಬಹುಬೇಗ ಶ್ರೀಮಂತರಾಗುವ ದುರಾಸೆಯಿಂದ ಅವರು ಈ ವೃತ್ತಿಗೆ ಇಳಿದಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿರುವ ಅಂಶ.

ಸಿಐಡಿ‍ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳು 6 ತಿಂಗಳಲ್ಲಿ
ಬಂಧಿಸಿರುವ 65 ಆರೋಪಿಗಳ ಪೈಕಿ ಬಹುತೇಕರು ಹೊಸಬರು. ಅವರ ವಿರುದ್ಧ ಈ ಹಿಂದೆ ಪ್ರಕರಣಗಳು ದಾಖಲಾಗಿಲ್ಲ. ವೃತ್ತಿಪರ ಕಳ್ಳರು ಈ ಕೃತ್ಯಗಳನ್ನು ಎಸಗುತ್ತಿಲ್ಲ.

‘ಮಾಫಿಯಾದ ಒಳ ಹೊರಗು ಗೊತ್ತಿಲ್ಲದೇ ಆಕಸ್ಮಿಕವಾಗಿ ಈ ದಂಧೆಗೆ ಇಳಿದವರೇ ಹೆಚ್ಚು. ವನ್ಯಜೀವಿಗಳಿಗೆ ಕಾಳಸಂತೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಸಿಗುತ್ತದೆ ಎಂಬ ನಂಬಿಕೆಯಿಂದಾಗಿ ಕಾಡಂಚಿನಲ್ಲಿ ಸಿಕ್ಕಿದ ವನ್ಯಜೀವಿಗಳ ಅಂಗಾಂಗಗಳನ್ನು ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ’ ಎನ್ನುತ್ತಾರೆ ಪೊಲೀಸರು.

ADVERTISEMENT

ವಿದೇಶಿ ಮಾಫಿಯಾ ವನ್ಯಜೀವಿಗಳನ್ನು ಬೇಟೆಯಾಡಲು ಹೆಚ್ಚಾಗಿ ಆದಿವಾಸಿಗಳನ್ನು, ಕಾಡಂಚಿನ ಪ್ರದೇಶಗಳಲ್ಲಿ ವಾಸ ಮಾಡುವ ಜನರನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಮಾತುಗಳೂ ಕೇಳಿ ಬಂದರೂ, ಆ ಬಗ್ಗೆ ಖಚಿತವಾದ ಆಧಾರಗಳು ಪೊಲೀಸರಿಗೆ ಸಿಕ್ಕಿಲ್ಲ.

ಹಣದ ಆಮಿಷಕ್ಕೆ ಸ್ಥಳೀಯರು ನಿರ್ದಿಷ್ಟ ಪ್ರಾಣಿ ಸಿಕ್ಕಿದ ಕೂಡಲೇ ಮಾಫಿಯಾದ ಸದಸ್ಯರಿಗೆ ತಲುಪಿಸು ತ್ತಾರೆ. ಅವರಿಂದ ಬೆಂಗಳೂರು, ಮುಂಬೈ ಹೀಗೆ ದೇಶದ ನಾನಾ ಭಾಗಗಳಿಗೆ ಲಕ್ಷಾಂತರ ರೂಪಾಯಿ ಬೆಲೆಯಲ್ಲಿ ಮಾರಾಟವಾಗುತ್ತಿವೆ. ಆದರೆ, ಈ ಜಾಲದ ಕುರಿತು ಸುಳಿವುಗಳೂ ಸಿಕ್ಕಿಲ್ಲ.

‌ಕೊಡಗು ಜಿಲ್ಲೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕದಲ್ಲಿರುವ 8 ಮಂದಿಯಷ್ಟೇ ಆರು ತಿಂಗಳಿನಲ್ಲಿ 65 ಆರೋಪಿಗಳನ್ನು ಬಂಧಿಸಿರುವುದು ವಿಶೇಷ. ಆನೆ ದಂತಗಳು, ಹುಲಿಯ ಉಗುರು, ಹಲ್ಲುಗಳು, 17.50 ಕೆ.ಜಿ ಚಿಪ್ಪುಹಂದಿಯ ಚಿಪ್ಪುಗಳೊಂದಿಗೆ, ಜೀವಂತ ನಕ್ಷತ್ರ ಆಮೆಗಳು, ಉಡಗಳು, ನವಿಲುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.