ADVERTISEMENT

ಮಂಡ್ಯ, ಮೈಸೂರು ರೈತರಿಗೂ ತಟ್ಟಲಿದೆ ಮಳೆ ಕೊರತೆಯ ಬಿಸಿ

ಸಿದ್ದಾಪುರ: ಮಳೆ ಕೈಕೊಟ್ಟರೆ ಬೇಸಿಗೆಯಲ್ಲಿ ಸಮಸ್ಯೆ

ರೆಜಿತ್ ಕುಮಾರ್
Published 3 ಜುಲೈ 2019, 19:45 IST
Last Updated 3 ಜುಲೈ 2019, 19:45 IST
ಕಳೆದ ವರ್ಷದ ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ಹರಿಯುತ್ತಿದ್ದ ನೀರು (ಸಂಗ್ರಹ ಚಿತ್ರ) 
ಕಳೆದ ವರ್ಷದ ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ಹರಿಯುತ್ತಿದ್ದ ನೀರು (ಸಂಗ್ರಹ ಚಿತ್ರ)    

ಸಿದ್ದಾಪುರ: ಕೊಡಗು ಜಿಲ್ಲೆ ಮಳೆಗೆ ಹೆಸರು ವಾಸಿಯಾದ ಪ್ರದೇಶ. ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ಮನೆಯಿಂದ ಹೊರಬರದ ಸ್ಥಿತಿ ಇರುತ್ತಿತ್ತು. ಭೋರ್ಗರೆವ ಮಳೆಯಲ್ಲಿ ಜೂನ್‌– ಜುಲೈನಲ್ಲಿ ಬಿರುಸಿನ ಕೃಷಿ ಚಟುವಟಿಕೆಗಳು ಆರಂಭವಾಗುತ್ತಿತ್ತು. ಕಳೆದ ವರ್ಷದ ಮಹಾಮಳೆಗೆ ಕೊಡಗು ತತ್ತರಿಸಿ, ಪ್ರವಾಹಕ್ಕೆ ಸಿಲುಕಿತ್ತು. ಪ್ರಸಕ್ತ ವರ್ಷವೂ ಹೆಚ್ಚು ಮಳೆಯಾಗುವ ನಿರೀಕ್ಷೆ ಇದ್ದರೂ, ಜುಲೈ ತಿಂಗಳು ಆರಂಭವಾಗದೂ ಮುಂಗಾರು ದುರ್ಬಲವಾಗಿದೆ.

ಕುಡಿಯುವ ನೀರಿಗೂ ತೊಂದರೆ:
ಕಳೆದ ವರ್ಷದ ಮಳೆಗಾಲದಲ್ಲಿ ನದ– ಕೆರೆಗಳು ತುಂಬಿ ಹರಿದಿದ್ದರೂ, ಬೇಸಿಗೆಗಾಲದಲ್ಲಿ ಜಿಲ್ಲೆಯ ವಿವಿಧ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಗಿತ್ತು. ಪ್ರಸಕ್ತ ವರ್ಷ ಮಳೆ ಕೈಕೊಟ್ಟರೇ ಮುಂದಿನ ಬೇಸಿಗೆಗಾಲದಲ್ಲಿ ಹನಿ ನೀರಿಗೂ ಹಾಹಾಕಾರ ಉಂಟಾಗುವ ಸಂಕಷ್ಟ ಎದುರಾಗಿದೆ.

ಮಾತ್ರವಲ್ಲದೇ ಜಿಲ್ಲೆಯಲ್ಲಿ ಮಳೆಯಾಗದಿದ್ದರೇ, ದಕ್ಷಿಣದ ಜೀವನದಿ ಕಾವೇರಿ ಹರಿಯದೇ, ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯದ ಹಾಗೂ ತಮಿಳುನಾಡಿನ ಕೃಷಿಕರಿಗೆ ಕೃಷಿಗೂ ನೀರಿಲ್ಲದಾಗುತ್ತದೆ. ಕುಡಿಯುವ ನೀರಿಗೂ ಕೂಡ ಸಮಸ್ಯೆ ಎದುರಾಗಲಿದೆ.

ADVERTISEMENT

ಕೃಷಿಗೆ ಹಿನ್ನಡೆ:

ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆದರೂ, ಮಳೆಯೂ ನಿರೀಕ್ಷಿಸಿದ ಮಟ್ಟದಲ್ಲಿ ಬರದ ಕಾರಣ ಹಲವೆಡೆಗಳಲ್ಲಿ ಕೃಷಿ ಕಾರ್ಯ ಕುಂಠಿತಗೊಂಡಿದೆ. ಸಾಮಾನ್ಯವಾಗಿ ಜುಲೈನಲ್ಲಿ ನಾಟಿ ಬಿತ್ತನೆ ಬೀಜಗಳನ್ನು ಹಾಕಲಾಗುತ್ತಿದ್ದು, ಜುಲೈ ಅಂತ್ಯದಲ್ಲಿ ಗದ್ದೆಯ ನಾಟಿ ಆರಂಭವಾಗಬೇಕಿತ್ತು. ಆದರೆ, ಸಿದ್ದಾಪುರ ಭಾಗದಲ್ಲಿ ಮಳೆಯ ಸಮಸ್ಯೆ ಎದುರಾಗಿರುವ ಕಾರಣ ಕೃಷಿ ಚಟುವಟಕೆಯೂ ಕೂಡ ವಿಳಂಬವಾಗುತ್ತಿದೆ. ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕೃಷಿಕರು ಕಷ್ಟಪಟ್ಟು ನಾಟಿ ಮಾಡಿದರೂ, ಕಾಡಾನೆ ಹಾವಳಿಯಿಂದ ಕೃಷಿ ನಾಶವಾಗುತ್ತಿದ್ದು, ಪ್ರಸಕ್ತ ವರ್ಷ ನೀರಿನ ಕೊರತೆಯಿಂದ ಕೃಷಿ ಮಾಡಲು ಸಾಧ್ಯವೇ ಎಂಬ ಪ್ರಶ್ನೆಯೂ ಕೃಷಿಕರಲ್ಲಿ ಮೂಡಿದೆ.

ಬಿತ್ತನೆ ಬೀಜದ ವಿತರಣೆ:ವಿರಾಜಪೇಟೆ ತಾಲ್ಲೂಕಿನಲ್ಲಿ 2018-19ನೇ ಸಾಲಿನಲ್ಲಿ 3,112 ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, 1,260.44 ಕ್ವಿಂಟಲ್‌ ರೈತರಿಗೆ ವಿತರಣೆಯಾಗಿದೆ. ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 14,000 ಹೆಕ್ಟೇರ್ ಭತ್ತದ ಬೆಳೆ ಗುರಿಯಿದೆ.

ಕಾಡಾನೆ ಹಾವಳಿಯಿಂದ ಹಲವಾರು ಮಂದಿ ಭತ್ತ ಕೃಷಿಯನ್ನು ಮಾಡುತ್ತಿಲ್ಲ. ಇದೀಗ ಮಳೆಯ ಕೊರತೆಯಿಂದ ಭತ್ತ ಕೃಷಿಗೆ ಹಿನ್ನಡೆಯಾಗುತ್ತಿದೆ. ಮುಂದಿನ ತಿಂಗಳೂ ಮಳೆ ಇಲ್ಲದಿದ್ದರೇ, ಕೃಷಿ ಅಸಾಧ್ಯ ಎಂದು ಕೃಷಿಕಎಂ.ಎಸ್. ವೆಂಕಟೇಶ್ ಆತಂಕದಿಂದ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.