ADVERTISEMENT

ತ್ಯಾಜ್ಯದಿಂದ ತಯಾರಾಯಿತು ‘ಗೋಬರ್ ಗ್ಯಾಸ್’

ಶನಿವಾರಸಂತೆ: ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಶ.ಗ.ನಯನತಾರಾ
Published 22 ಫೆಬ್ರುವರಿ 2019, 18:30 IST
Last Updated 22 ಫೆಬ್ರುವರಿ 2019, 18:30 IST
ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕ ಸಿ.ಎಸ್. ಸತೀಶ್ ಅವರಿಂದ ಶಾಲಾ ತ್ಯಾಜ್ಯದಿಂದ ಸ್ಥಾಪನೆಗೊಂಡ ಜೈವಿಕ ಅನಿಲ ಉತ್ಪಾದನಾ ಘಟಕ
ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕ ಸಿ.ಎಸ್. ಸತೀಶ್ ಅವರಿಂದ ಶಾಲಾ ತ್ಯಾಜ್ಯದಿಂದ ಸ್ಥಾಪನೆಗೊಂಡ ಜೈವಿಕ ಅನಿಲ ಉತ್ಪಾದನಾ ಘಟಕ   

ಶನಿವಾರಸಂತೆ (ಕೊಡಗು): ಸಾಮಾನ್ಯವಾಗಿ ಮನೆಗಳ ತ್ಯಾಜ್ಯ ರಸ್ತೆಯ ಬದಿಗೋ ಕಸದ ರಾಶಿಗೋ ಸೇರುತ್ತದೆ. ಆದರೆ, ಸರ್ಕಾರಿ ಶಾಲೆಯೊಂದರ ತ್ಯಾಜ್ಯ ಕ್ರಿಯಾಶೀಲ ಶಿಕ್ಷಕರಿಂದ ಗೋಬರ್ ಗ್ಯಾಸ್ ಆಗಿ ಸದ್ಬಳಕೆಯಾಗುತ್ತಿದ್ದು ಗ್ರಾಮಸ್ಥರ ಮೆಚ್ಚುಗೆ ಗಳಿಸಿದೆ.

ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಸ್ವ–ಅನುಭವದ ಕಲಿಕೆಗೆ ಹೆಸರಾಗಿದ್ದು ಇದೀಗ ಪರಿಸರ ಕಾಳಜಿಯ ಮತ್ತೊಂದು ಕಾರ್ಯ ಸೇರ್ಪಡೆಯಾಗಿದೆ. ಹೊಸ ಗರಿ ಮೂಡಿದೆ. ಅದುವೇ ಶಾಲಾ ತ್ಯಾಜ್ಯದಿಂದ ಸ್ಥಾಪಿಸಿದ ಜೈವಿಕ ಅನಿಲ ಉತ್ಪಾದನಾ ಘಟಕ.

ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತ ಶಾಲೆಯ ಸಹಶಿಕ್ಷಕ ಸಿ.ಎಸ್. ಸತೀಶ್ ಈ ಹಿಂದೆ ಸೋಲಾರ್ ಪಾರ್ಕ್ ಅನ್ನು ನಿರ್ಮಿಸಿ ಶಾಲಾ ಕಂಪ್ಯೂಟರ್ ಮತ್ತು ದೀಪಗಳು ಬೆಳಗುವಂತೆ ಮಾಡಿ ಸೌರಶಕ್ತಿ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿದ್ದರು. ಈಗ ಶಾಲಾ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸಿ ಇಂಧನ ಉಳಿತಾಯದ ಅರಿವು ಮೂಡಿಸಿದ್ದಾರೆ.

ADVERTISEMENT

5ನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಜೈವಿಕ ಅನಿಲ ಉತ್ಪಾದನೆ ಕುರಿತಾಗಿ ತರಕಾರಿ ಸಿಪ್ಪೆ, ಆಹಾರ ತ್ಯಾಜ್ಯ, ಸಸ್ಯದ ಅವಶೇಷ, ಪ್ರಾಣಿಗಳ ಸಗಣಿ ಇತ್ಯಾದಿಗಳನ್ನು ವಾಯುವಿನ ಸಂಪರ್ಕವಿಲ್ಲದೇ ಕೊಳೆಯಿಸಿದಾಗ ಜೈವಿಕ ಅನಿಲ ಉತ್ಪತ್ತಿಯಾಗುತ್ತದೆ ಎಂದು ಸವಿಸ್ತಾರವಾಗಿ ತಿಳಿಸಲಾಗಿದೆ.

ಇದನ್ನು ಕಾರ್ಯರೂಪದಲ್ಲಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕೆಂದು ಯೋಚಿಸಿದ್ದ ಶಿಕ್ಷಕ ಸತೀಶ್ ಇದಕ್ಕಾಗಿ ಬಳಸಿಕೊಂಡದ್ದು ಶಾಲಾ ಆವರಣದಲ್ಲಿ ನಿರುಪಯುಕ್ತವಾಗಿ ದುಃಸ್ಥಿತಿಯಲ್ಲಿದ್ದ ಮಳೆ ಕೊಯ್ಲು ಟ್ಯಾಂಕ್‌ ಅನ್ನು.

ಸಾಮಾನ್ಯವಾಗಿ ಎಲ್ಲ ಸರ್ಕಾರಿ ಶಾಲಾ ಆವರಣದಲ್ಲಿ ಮಳೆ ನೀರು ಸಂಗ್ರಹ ಘಟಕ ಕಾಣಬಹುದು. ಆದರೆ, ಅದು ಎಲ್ಲಿಯೂ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೆಡೆ ಸಂಪೂರ್ಣವಾಗಿ ಹಾಳಾಗಿದ್ದರೆ ಮತ್ತೆ ಕೆಲವೆಡೆ ನೀರು ಸಂಗ್ರಹಣಾ ತೊಟ್ಟಿಯಾಗಿ ಪರಿವರ್ತಿತವಾಗಿದೆ.

ಇದೇ ಮಳೆ ನೀರು ಸಂಗ್ರಹ ಘಟಕವನ್ನು ಅತಿ ಕಡಿಮೆ ವೆಚ್ಚದಲ್ಲಿ ದುರಸ್ತಿಗೊಳಿಸಿ ಸ್ವತಃ ಸತೀಶ್, ಮುಖ್ಯಶಿಕ್ಷಕ ಮಂಜುನಾಥ್ ಹಾಗೂ ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಮಳೆ ಕೊಯ್ಲು ಘಟಕವನ್ನು ಜೈವಿಕ ಅನಿಲ ಉತ್ಪಾದನಾ ಘಟಕವನ್ನಾಗಿ ಪರಿವರ್ತಿಸಿದರು. ಹಳೆಯ ಡ್ರಮ್ ಭಾಗವನ್ನು ಬಳಸಿಕೊಂಡು ತರಕಾರಿ ತ್ಯಾಜ್ಯ, ಉಳಿಕೆ ಆಹಾರ ಪದಾರ್ಥಗಳನ್ನು ಹಾಕುವ ಪೂರ್ವ ಸಂಗ್ರಹಣಾ ತೊಟ್ಟಿಯನ್ನು ಮಾಡಿದರು. ಇಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಆಯ್ದ ಕೊಳೆಯುವಂತ ಕಸಕಡ್ಡಿಗಳನ್ನು ಹಾಕುತ್ತಾರೆ.

ಜೈವಿಕ ಅನಿಲ ಉತ್ಪಾದನಾ ಘಟಕದ ವೀಕ್ಷಿಸಿದ ಸಿಆರ್‌ಪಿ ಮಧುಕುಮಾರ್, ವಿವಿಧ ಸರ್ಕಾರಿ ಶಾಲಾ ಮುಖ್ಯಶಿಕ್ಷಕರು, ಸಹಶಿಕ್ಷಕರು

ಮಧ್ಯಾಹ್ನ ಊಟದ ನಂತರ ಕೈ ಮತ್ತು ತಟ್ಟೆಗಳನ್ನು ಈ ಘಟಕದಲ್ಲಿ ತೊಳೆಯುತ್ತಾರೆ. ಅಡುಗೆ ಮಾಡುವಾಗ ಉಳಿಯುವ ತರಕಾರಿ ಸಿಪ್ಪೆ ಇತ್ಯಾದಿ ತ್ಯಾಜ್ಯಗಳನ್ನು ಈ ಘಟಕದಲ್ಲಿ ಹಾಕಲಾಗುತ್ತದೆ. ಇಲ್ಲಿ ತರಕಾರಿ ತ್ಯಾಜ್ಯ, ಬೆಂದ, ಬೆಂದಿರದ ಹಳಸಿದ ಪದಾರ್ಥ, ಸಾರ ತೆಗೆದ ಟೀ–ಪುಡಿ, ಹಾಳಾಗಿರುವ ಹಾಲು, ಹಾಲಿನ ಉತ್ಪನ್ನಗಳನ್ನೂ ಹಾಕಬಹುದು. ಆದರೆ, ತೆಂಗಿನಕಾಯಿಯ ಕರಟ, ನಾರು, ಮೊಟ್ಟೆಯ ಕವಚ, ಈರುಳ್ಳಿ ಮತ್ತು ಮೂಳೆಗಳನ್ನು ಹಾಕಬಾರದು ಎನ್ನುತ್ತಾರೆ ಸತೀಶ್.

ಪೂರ್ವ ಸಂಗ್ರಹಣಾ ತೊಟ್ಟಿಯಲ್ಲಿ ಹಾಕಿದ ತ್ಯಾಜ್ಯಗಳು ನೇರವಾಗಿ ಮಳೆ ನೀರು ಘಟಕದೊಳಗೆ ಹೋಗಿ ವಾಯುವಿನ ಸಂಪರ್ಕವಿಲ್ಲದೇ ಕೊಳೆಯಲು ಆರಂಭಿಸುತ್ತವೆ. ಜೈವಿಕ ಅನಿಲ ಉತ್ಪತ್ತಿಯಾಗುತ್ತದೆ. ಸುಮಾರು 5 ಕೆ.ಜಿ. ಹಸಿ ಕಸ, ತ್ಯಾಜ್ಯದಿಂದ ಅರ್ಧ ಕೆ.ಜಿಯಷ್ಟು ಜೈವಿಕ ಅನಿಲ ಉತ್ಪತ್ತಿಯಾಗುತ್ತದೆ ಎಂದೂ ಮಾಹಿತಿ ನೀಡುತ್ತಾರೆ ಅವರು.

ಜೈವಿಕ ಅನಿಲ ಉತ್ಪತ್ತಿಯ ನಂತರ ಹೊರಬರುವ ಬಗ್ಗಡವನ್ನು ಕಾಂಪೋಸ್ಟ್ ಗೊಬ್ಬರ ಗುಂಡಿಗೆ ಸೇರುವಂತೆ ಸಂಪರ್ಕ ಕಲ್ಪಿಸಿದ್ದು, ಇದು ಕೂಡ ಶಾಲಾ ತರಕಾರಿ ತೋಟಕ್ಕೆ ಜೈವಿಕ ಗೊಬ್ಬರವನ್ನು ಒದಗಿಸುತ್ತದೆ. ಜೈವಿಕ ಅನಿಲ ಘಟಕದ ಸ್ಥಾಪನೆಯಿಂದ ಶಾಲಾ ತ್ಯಾಜ್ಯದ ಪರಿಣಾಮಕಾರಿ ವಿಲೇವಾರಿ ಸಾಧ್ಯವಾಗುತ್ತದೆ. ಇಲ್ಲಿಯ ತ್ಯಾಜ್ಯವನ್ನು ದೊಡ್ಡ ಸಂಪನ್ಮೂಲವಾಗಿ ಬಳಸಿಕೊಳ್ಳಲಾಗುತ್ತಿದೆ.

ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೈವಿಕ ಇಂಧನದ ಬಗ್ಗೆ ಅರಿವು ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಲಾಭಿವೃದ್ಧಿ ಸಮಿತಿ, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಪನ್ಮೂಲ ವ್ಯಕ್ತಿ ಮಧುಕುಮಾರ್, ವಿವಿಧ ಶಾಲಾ ಮುಖ್ಯಶಿಕ್ಷಕರು, ಸಹಶಿಕ್ಷಕರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಶಿಕ್ಷಕ ಸಿ.ಎಸ್.ಸತೀಶ್ ಇತರ ಶಿಕ್ಷಕರಿಗೂ ಮಾದರಿ ಆಗಿದ್ದಾರೆ.

ಎಲ್ಲದಕ್ಕೂ ಪರಿಹಾರ ಜೈವಿಕ ಅನಿಲ

ಜೈವಿಕ ಇಂಧನ ಶಕ್ತಿ ಮುಂದೆ ಅತೀ ದೊಡ್ಡ ಇಂಧನ ಮೂಲವಾಗುವ ಸಾಧ್ಯತೆ ಇದೆ. ದಿನದಿಂದ ದಿನಕ್ಕೆ ಏರುತ್ತಿರುವ ಅಡುಗೆ ಅನಿಲದ ಬೆಲೆ. ಹಣ ಪಾವತಿಸಿದರೂ ಗ್ಯಾಸ್ ಸಿಗದ ಪರಿಸ್ಥಿತಿ. ಇದಕ್ಕೆಲ್ಲ ಪರಿಹಾರ ಒದಗಿಸುವಂತದ್ದು ಜೈವಿಕ ಅನಿಲ. ಕಡಿಮೆ ವೆಚ್ಚದಲ್ಲಿ ಪ್ಲಾಸ್ಟಿಕ್ ಸಂಗ್ರಹಣಾ ತೊಟ್ಟಿಗಳನ್ನು ರೂಪಿಸಿಕೊಂಡು ಜೈವಿಕ ಅನಿಲ ಉತ್ಪಾದನೆ ಮಾಡಿ ಬಳಸಿಕೊಳ್ಳಬಹುದು. ಇದರಿಂದ ತ್ಯಾಜ್ಯಕ್ಕೆ ಮುಕ್ತಿ ದೊರೆಯುವುದಲ್ಲದೇ ಒಂದು ಸಂಪನ್ಮೂಲವಾಗಿಯೂ ರೂಪಿಸಿಕೊಳ್ಳಬಹುದು.

ಈಗಾಗಲೇ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಜೈವಿಕ ಡೀಸೆಲ್ ಉತ್ಪಾದನೆಗಾಗಿ ಬೇವು, ಹೊಂಗೆ, ಹಿಪ್ಪೆ, ಸಿಮರೂಬ, ಅಮೂರ ಜಟ್ರೋಫಾದಂತ ಮರಗಿಡಗಳನ್ನು ಹೆಚ್ಚಾಗಿ ಬೆಳೆಸಿ ಅವುಗಳ ಬೀಜಗಳನ್ನು ಸಂಸ್ಕರಿಸಿ ಜೈವಿಕ ಡೀಸೆಲ್ ತಯಾರಿಸುವ ಕಾರ್ಯ ಹಲವೆಡೆ ಮಾಡುತ್ತಿರುವುದು ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.