ಮಡಿಕೇರಿ: ಲೋಕಸಭೆ ಚುನಾವಣೆಯ ಸಂಬಂಧ ರಾಜಕೀಯ ಪಕ್ಷಗಳ ಪ್ರಮುಖರಿಗೆ ಶುಕ್ರವಾರ ವಿದ್ಯುನ್ಮಾನ ಮತಯಂತ್ರ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಮತ್ತು ವಿ.ವಿ ಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಸಮ್ಮುಖದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.
ವಿದ್ಯುನ್ಮಾನ ಮತಯಂತ್ರಗಳಲ್ಲಿ ಪ್ರಮುಖವಾಗಿ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಹಾಗೆಯೇ ವಿ.ವಿ ಪ್ಯಾಟ್ ಪ್ರಮುಖವಾಗಿದ್ದು, ಬ್ಯಾಲೆಟ್ ಯುನಿಟ್ನಲ್ಲಿ ಮತದಾನ ಮಾಡಿದ ನಂತರ ಕಂಟ್ರೋಲ್ ಯುನಿಟ್ನಲ್ಲಿ ಭದ್ರವಾಗಲಿದೆ ಎಂದು ವಿದ್ಯುನ್ಮಾನ ಮತಯಂತ್ರದ ಮಾಸ್ಟರ್ ತರಬೇತುದಾರ ವಾಲ್ಟರ್ ಡಿಮೆಲ್ಲೊ ಮಾಹಿತಿ ನೀಡಿದರು.
ಮತದಾನ ಯಾರಿಗೆ ಮಾಡಲಾಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ವಿ.ವಿ ಪ್ಯಾಟ್ ಸಹಕಾರಿ ಆಗಲಿದೆ. ವಿದ್ಯುನ್ಮಾನ ಮತಯಂತ್ರ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇಡೀ ವಿಶ್ವದಲ್ಲಿಯೇ ವಿದ್ಯುನ್ಮಾನ ಮತಯಂತ್ರದಿಂದ ಮತದಾನ ಮಾಡುವುದು ಮಾದರಿ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ‘ಸದ್ಯದಲ್ಲಿಯೇ ಚುನಾವಣಾ ದಿನಾಂಕ ಪ್ರಕಟವಾಗಲಿದ್ದು, ಶಾಂತಿಯುತ ಚುನಾವಣೆಗೆ ಅಧಿಕಾರಿಗಳು ಶ್ರಮಿಸಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ. ಲಕ್ಷ್ಮಿಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್, ತಹಶೀಲ್ದಾರ್ ಕುಸುಮಾ, ಷಂಶುದ್ದೀನ್, ಕೆ.ವಿ. ಸುರೇಶ್, ರಾಜಕೀಯ ಪಕ್ಷಗಳ ಪ್ರಮುಖರಾದ ಸಜೀಲ್ ಕೃಷ್ಣ (ಬಿಜೆಪಿ), ತೆನ್ನೀರ ಮೈನಾ (ಕಾಂಗ್ರೆಸ್), ಅಜೀತ್ (ಜಾತ್ಯತೀತ ಜನತಾ ದಳ), ಬಸವರಾಜು ಮತ್ತು ದಿಲೀಪ್ (ಬಹುಜನ ಸಮಾಜ ಪಕ್ಷ) ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.