ADVERTISEMENT

‘ಮನೆಯಲ್ಲೇ ಇರಿ’: ಜಿಲ್ಲಾ ಬಿಜೆಪಿ ಮನವಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 14:07 IST
Last Updated 23 ಮಾರ್ಚ್ 2020, 14:07 IST

ಮಡಿಕೇರಿ: ‘ಮಾರ್ಚ್ 31ರ ವರೆಗೆ ಮನೆಯಲ್ಲಿಯೇ ಇರಿ; ಅನಿವಾರ್ಯ ಹಾಗೂ ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ’ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಬಿನ್‌ ದೇವಯ್ಯ ಮನವಿ ಮಾಡಿದ್ದಾರೆ.

‘ರೇಷನ್ ಅಥವಾ ತರಕಾರಿ ಖರೀದಿಸಲು ಮನೆಯ ಒಬ್ಬರು ಆರೋಗ್ಯವಂತರು ಮಾತ್ರ ಹೊರಗೆ ಬನ್ನಿ. ಮನೆಯಲ್ಲಿ ಮಕ್ಕಳು ಮತ್ತು ಹಿರಿಯರನ್ನು ಹೊರಕ್ಕೆ ಕಳುಹಿಸಬೇಡಿ. ಮೈಸೂರು, ಮಂಗಳೂರು, ಹಾಸನ, ಕೇರಳಕ್ಕೆ ತೆರಳುವ ಪ್ರಯತ್ನ ಬೇಡ. ಗಡಿಯ ಎಲ್ಲ ಚೆಕ್‌ಪೋಸ್ಟ್‌ಗಳು ಬಂದ್ ಆಗಿವೆ’ ಎಂದು ಹೇಳಿದ್ದಾರೆ.

‘ಯಾವುದೇ ಕಾರಣಕ್ಕೂ ಗುಂಪು ಸೇರದಿರಿ. ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಂದು ಅನಗತ್ಯವಾಗಿ ಓಡಾಡಬೇಡಿ. ಕೊರೊನಾ ಸೋಂಕು ನಿಮಗೂ ತಗುಲಿತು ಎಚ್ಚರ. ಸರ್ಕಾರದ ಲಾಕ್‌ಡೌನ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನಗಳಲ್ಲಿ ಅತ್ತಿಂದಿತ್ತ ತೆರಳ ಬೇಡಿ. ಕೊರೊನಾ ಸೋಂಕಿತ ದೇಶದ 75 ಜಿಲ್ಲೆಗಳಲ್ಲಿ ಕೊಡಗು ಕೂಡ ಒಂದು. ಈ ಮಾರಕ ಸೋಂಕಿನಿಂದ ಕೊಡಗನ್ನು ಮುಕ್ತವಾಗಿಸುವ ಪಣತೊಡೋಣ. ಇದಕ್ಕಾಗಿ ಮನೆಯಿಂದ ಹೊರಕ್ಕೆ ಬಾರದೇ ಇರೋಣ’ ಎಂದು ಕೋರಿದ್ದಾರೆ.

‘ನಮ್ಮ ಆರೋಗ್ಯದ ಹಿತ ಬಯಸಿರುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಅಧಿಕಾರಿಗಳ ಜೊತೆ ವಾಗ್ವಾದ ನಡೆಸಬೇಡಿ. ನಮ್ಮ ಹಿತಕ್ಕಾಗಿಯೇ ಅವರು ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಮರೆಯದಿರೋಣ. ಜಿಲ್ಲಾಡಳಿತದೊಂದಿಗೆ ನಿಯಮಗಳನ್ನು ಪಾಲಿಸಲು ಎಲ್ಲರೂ ಕೈಜೋಡಿಸೋಣ. ಇದು ನಮ್ಮ ಮತ್ತು ನಿಮ್ಮ ಆರೋಗ್ಯದ ಪ್ರಶ್ನೆ. ಹೀಗಾಗಿ, ನಾವು ಸುರಕ್ಷಿತವಾಗಿದ್ದು ಇತರರ ಆರೋಗ್ಯವನ್ನು ಕೂಡ ಸುರಕ್ಷಿತವಾಗಿರಿಸೋಣ. ಕೊಡಗು, ಕರ್ನಾಟಕ ಮತ್ತು ಭಾರತ ಸುರಕ್ಷಿತವಾಗಿರಲಿ. ಮೊದಲು ನಾವು ಸುರಕ್ಷಿತವಾಗಿರುವುದು ಮುಖ್ಯ. ಮಾರ್ಚ್ 31ರ ವರೆಗೆ ಮನೆಯಲ್ಲಿಯೇ ಸುರಕ್ಷಿತವಾಗಿರಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.