ಮಡಿಕೇರಿ: ‘ಪ್ರಾಜೆಕ್ಟ್ ಕೂರ್ಗ್’ ವತಿಯಿಂದ ರೂಪಿಸಲಾದ ಯಶಸ್ವಿ ಯೋಜನೆಯ ‘ಕಾಲೂರು ಸ್ಟೋರ್ಸ್’ ಎರಡನೇ ಮಳಿಗೆಯು ಏ.14ರಂದು ನಗರದಲ್ಲಿ ಉದ್ಘಾಟನೆ ಆಗಲಿದೆ.
ಪ್ರಕೃತಿ ವಿಕೋಪಕ್ಕೆ ಒಳಗಾದ ಕಾಲೂರು ಗ್ರಾಮದ ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ‘ಪ್ರಾಜೆಕ್ಟ್ ಕೂರ್ಗ್’ ಮೂಲಕ ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರವು ಯಶಸ್ವಿ ಹೆಸರಿನಲ್ಲಿ ಮಸಾಲೆ ಪದಾರ್ಥಗಳ ಉತ್ಪನ್ನ ತಯಾರಿಕೆಯಲ್ಲಿ ಕಾಲೂರಿನ ಮಹಿಳೆಯರಿಗೆ ತರಬೇತಿ ನೀಡಲಾಗಿತ್ತು. ನಂತರ, ಕಾಲೂರು ಪ್ರಾಡೆಕ್ಟ್ ಹೆಸರಿನಲ್ಲಿ ಮಸಾಲೆ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿತ್ತು.
ಜಿಲ್ಲಾಡಳಿತದ ನೆರವಿನಿಂದ ರಾಜಾಸೀಟ್ ಮುಂಬದಿಯಲ್ಲಿ ಕಾಲೂರು ಸ್ಟೋರ್ಸ್ ತೆರೆಯಲಾಗಿದ್ದು, ಇದೀಗ ಮಡಿಕೇರಿಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಶಿಶು ಕಲ್ಯಾಣ ಸಂಸ್ಥೆಯ ಮುಂಭಾಗ ಮಳಿಗೆ ಉದ್ಘಾಟನೆಗೊಳ್ಳಲಿದೆ.
14ರಂದು ಬೆಳಿಗ್ಗೆ 11ಕ್ಕೆ ಮಳಿಗೆಯನ್ನು ದಕ್ಷಿಣ ಕನ್ನಡ ಕನ್ನಡಿಗರ ಸಂಘದ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಉದ್ಘಾಟಿಸಲಿದ್ದಾರೆ. ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ಶಾಸಕ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕೊಡಗು ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಕೆ. ಮೋಹನ್ ಮೊಣ್ಣಪ್ಪ, ಸಾಹಿತಿ ನಾಗೇಶ್ ಕಾಲೂರು ಪಾಲ್ಗೊಳ್ಳಲಿದ್ದಾರೆ.
ಕಾಲೂರು ಮಹಿಳೆಯರು ಮಸಾಲೆ ಪದಾರ್ಥಗಳನ್ನು ತಯಾರಿಸಲು ತರಬೇತಿ ಪಡೆದ 180 ದಿನಗಳಲ್ಲಿಯೇ ಅವರು ತಯಾರಿಸಿದ ಮಸಾಲೆ ಪದಾರ್ಥಗಳ ಮಾರಾಟದ ಎರಡನೇ ಮಳಿಗೆ ಪ್ರಾರಂಭ ಆಗುತ್ತಿರುವುದು ಮಹಿಳೆಯರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದು ಪ್ರಾಜೆಕ್ಟ್ ಕೂರ್ಗ್ ಮುಖ್ಯಸ್ಥ ಬಾಲಾಜಿ ಕಶ್ಯಪ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.