ಮಡಿಕೇರಿ: ವೈಕುಂಠ ಏಕಾದಶಿಯ ಪ್ರಯುಕ್ತ ಕೊಡಗು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು. ನಗರದ ಮಹದೇವಪೇಟೆ ಶ್ರೀಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿಬೆಳಿಗ್ಗೆ 7.30ರಿಂದ ಅಭಿಷೇಕ, ಮಧ್ಯಾಹ್ನ 12.30ಕ್ಕೆ ನಡೆದ ಮಹಾಪೂಜೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಹಾಲು, ಎಳನೀರು ಬಳಸಿ ಅಭಿಷೇಕ ಮಾಡಲಾಯಿತು. ಪೂಜೆಗೆ ಹೂವು, ತುಳಸಿ ಮಾಲೆ ತಂದಿದ್ದ ಭಕ್ತರು ದೇವರಿಗೆ ಸಮರ್ಪಿಸಿದರು.
ದೇವಾಲಯದಲ್ಲಿ ವಿಶೇಷ ಸಪ್ತ ದ್ವಾರಗಳನ್ನು ನಿರ್ಮಿಸಲಾಗಿತ್ತು. ಇಡೀ ದೇವಾಲಯ ಹೂವಿನಿಂದ ಸಿಂಗರಿಸಲಾಗಿತ್ತು. ದೇವರ ಮೂರ್ತಿಯನ್ನು ಆಭರಣ ಮತ್ತು ಹೂವು, ತುಳಸಿ ಮಾಲೆಗಳಿಂದ ಅಲಂಕರಿಸಲಾಯಿತು. ಮಕ್ಕಳಿಂದ ಹಿರಿಯರವರೆಗೆ ನೂರಾರು ಜನರು ವೆಂಕಟೇಶ್ವರನ ದರ್ಶನಕ್ಕೆ ಸರದಿಯಲ್ಲಿ ನಿಂತಿದ್ದರು. ತಮ್ಮ ಇಷ್ಟ ದೇವರಿಗೆ ಉಪವಾಸದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನದ ಅರ್ಚಕ ವೆಂಕಟರಮಣ ಭಟ್ ಮಾತನಾಡಿ, ‘ದೇವರಿಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಬಾಳೆಹಣ್ಣು, ಎಳನೀರು, ನೀರು... ಹೀಗೆ ಮುಂತಾದ ವಸ್ತುಗಳಿಂದ ದೇವರ ವಿಗ್ರಹಕ್ಕೆ ಅಭಿಷೇಕವನ್ನು ಮಾಡುತ್ತೇವೆ. ವಿಶೇಷ ದಿನದಂದು ದೇವರಿಗೆ ಆಭರಣ ಹಾಗೂ ಹೂವಿನಿಂದ ಶೃಂಗರಿಸಲಾಗುವುದನ್ನು ನೋಡಲು ಭಕ್ತರೂ ಏಕಾದಶಿ ಸಂದರ್ಭ ಬರುತ್ತಾರೆ’ ಎಂದು ತಿಳಿಸಿದರು.
ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ಹಂಚಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.