ಸೋಮವಾರಪೇಟೆ ತಾಲ್ಲೂಕಿನ ಅಂಬೇಡ್ಕರ್ ವಸತಿ ಶಾಲೆ ಸಮೀಪದಿಂದ ತೋಳೂರು–ಶೆಟ್ಟಳ್ಳಿ ವರೆಗಿನ 2.5 ಕಿ.ಮೀ ಕಾಮಗಾರಿಯನ್ನು ಸಹಾಯಕ ಎಂಜಿನಿಯರ್ ಆರ್ಭಸ್ ಹಾಗೂ ಸಿವಿಲ್ ಎಕ್ಸ್ ಪರ್ಟ್ ಟೆಸ್ಟಿಂಗ್ ಸೆಂಟರಿನ ತಿಲಕ್ ಗುರುವಾರ ಪರಿಶೀಲಿಸಿದರು.
ಸೋಮವಾರಪೇಟೆ: ₹20 ಕೋಟಿ ವೆಚ್ಚದಲ್ಲಿ ಮಾಗಡಿ-ಜಾಲ್ಸೂರು ರಾಜ್ಯ ಹೆದ್ದಾರಿ 85 ರ ತಾಲ್ಲೂಕಿನ ಅಲೆಕಟ್ಟೆ-ತೋಳೂರುಶೆಟ್ಟಳ್ಳಿ- ಕೂತಿ ಮಾರ್ಗ ರಸ್ತೆ ರಸ್ತೆ ವಿಸ್ತರಣೆ ಹಾಗೂ ಮರು ಡಾಂಬರೀಕಾರಣ ಕಾಮಗಾರಿಯನ್ನು ಸಹಾಯಕ ಎಂಜಿನಿಯರ್ ಆರ್ಭಸ್ ಹಾಗೂ ಸಿವಿಲ್ ಎಕ್ಸ್ ಪರ್ಟ್ ಟೆಸ್ಟಿಂಗ್ ಸೆಂಟರಿನ ತಿಲಕ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಮಾರ್ಗದ ಅಂಬೇಡ್ಕರ್ ವಸತಿ ಶಾಲೆ ಸಮೀಪದಿಂದ ತೋಳೂರುಶೆಟ್ಟಳ್ಳಿ ವರೆಗಿನ 2.5 ಕಿ.ಮೀ. ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿದ ಕೂತಿ ಗ್ರಾಮಸ್ಥರು, ಕಾಮಗಾರಿ ಸರಿಪಡಿಸದಿದ್ದಲ್ಲಿ ಲೋಕೋಪಯೋಗಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಪರಿಶೀಲನೆ ನಡೆಯಿತು.
ನಂತರ ಮಾತನಾಡಿದ ಸಹಾಯಕ ಎಂಜಿನಿಯರ್ ಆರ್ಭಸ್, ‘ಯೋಜನಾ ವರದಿಯಂತೆ ಕೆಲಸ ನಡೆಯುತ್ತಿದೆ. ಆದರೆ, ಕೆಲವೆಡೆ ಕೆಲಸದಲ್ಲಿ ವ್ಯತ್ಯಯವಾಗಿದೆ. ತಕ್ಷಣದಿಂದಲೇ ಇದನ್ನು ಸರಿಪಡಿಸಲಾಗುವುದು. ಮಳೆ ಕಡಿಮೆಯಾದಲ್ಲಿ ಕೆಲವೆಡೆ ಡಾಂಬರೀಕರಣ ಮಾಡಲಾಗುವುದು’ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್, ಕೂತಿ ಗ್ರಾಮಧ್ಯಕ್ಷ ಎಚ್.ಎಂ. ಜಯರಾಮ್, ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ. ದಿನೇಶ್, ಪ್ರಮುಖರಾದ ಮಾಚಯ್ಯ, ಜಗದೀಶ್, ಹೆಚ್.ಡಿ. ಮೋಹನ್, ದಿವಾಕರ್, ಜಿತೇಂದ್ರ, ಶಿವರಾಜ್ ಸೇರಿದಂತೆ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.