ಮಡಿಕೇರಿ: ಮಡಿಕೇರಿಯಲ್ಲಿ 50 ಕಡೆ ಪೆಟ್ರೋಲ್ ಬಾಂಬ್ ಹಾಕಿ ಭೀತಿ ಸೃಷ್ಟಿಸಬೇಕು. ಆಗ ಹಿಂದೂಗಳೇ ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಹೇಳುತ್ತಾರೆ ಎಂದು ಮಲಯಾಳಂ ಭಾಷೆಯಲ್ಲಿ ಮಾತನಾಡಿರುವ ಆರೋಪದ ಮೇರೆಗೆ ಇಬ್ಬರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿ ನಗರಸಭಾ ಸದಸ್ಯ ಜೆಡಿಎಸ್ನ ಮುಸ್ತಾಫ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಅಬ್ದುಲ್ಲಾ ಬಂಧಿತರು.
ಪ್ರಕರಣದ ವಿವರ
ಇಲ್ಲಿನ ಪೆನ್ಷನ್ಲೈನ್ ನಿವಾಸಿ ಶೇಷಪ್ಪ ರೈ ಎಂಬುವವರು ಯಾವುದೋ ಕೆಲಸದ ಸಲುವಾಗಿ ಏಪ್ರಿಲ್ 23ರಂದು ಅಬ್ದುಲ್ಲ ಅವರಿಗೆ ಕರೆ ಮಾಡಿದರು. ಆಗ ಕರೆಯನ್ನು ಕಟ್ ಮಾಡಲು ಹೋದ ಅಬ್ದುಲ್ಲ ಅವರು ಕರೆ ಸ್ವೀಕರಿಸಿದರು. ಇದರ ಪರಿವೆ ಇಲ್ಲದ ಅಬ್ದುಲ್ಲ ಹಾಗೂ ಮುಸ್ತಾಫ 3 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ವೇಳೆ ಮಡಿಕೇರಿಯಲ್ಲಿ 50 ಕಡೆ ಪೆಟ್ರೊಲ್ ಬಾಂಬ್ ಹಾಕಿ ಇಡೀ ಮಡಿಕೇರಿಯನ್ನೇ ಹೊತ್ತಿ ಉರಿಸಬೇಕು. ಇದಕ್ಕೆ ದುಡ್ಡಿರುವವರು ₹ 50 ಸಾವಿರದಿಂದ ₹ 1 ಲಕ್ಷ ಹಾಕಬೇಕು ಎಂದು ಮಾತನಾಡಿಕೊಂಡಿದ್ದಾರೆ ಎಂದು ಆರೋಪಿಸಿ ಶೇಷಪ್ಪ ದೂರು ನೀಡಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.