ವಿರಾಜಪೇಟೆ: ಭಾರತದ ಬಹುದೊಡ್ಡ ಕೃಷಿ ಕೈಗಾರಿಕೆಯಾದ ಕಾಫಿ, ಟೀ ಮತ್ತು ರಬ್ಬರ್ ಪ್ಲಾಂಟೇಷನ್ಗಳ ಬೆಳವಣಿಗೆಯಲ್ಲಿ ನೌಕರರ ಶ್ರಮ ಶ್ಲಾಘನೀಯ ಎಂದು ದಕ್ಷಿಣ ಭಾರತದ ದಿ ಎಸ್ಟೇಟ್ ಸ್ಟಾಪ್ಸ್ ಯೂನಿಯನ್ ಆಫ್ ಸೌತ್ ಇಂಡಿಯಾ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಸ್ವಾಮಿ ಹೇಳಿದರು.
ಸಮೀಪದ ಪಾಲಿಬೆಟ್ಟದ ಟಾಟಾ ಕಂಪೆನಿಯ ಸ್ಟಾಫ್ ಕ್ಲಬ್ನಲ್ಲಿ ಬುಧವಾರ ನಡೆದ ದಿ ಎಸ್ಟೇಟ್ ಸ್ಟಾಪ್ಸ್ ಯೂನಿಯನ್ ಆಫ್ ಸೌತ್ ಇಂಡಿಯಾ ಸಂಘದ ಜಿಲ್ಲಾ ಘಟಕದ 45ನೇ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
‘ವಿಶ್ವದಾದ್ಯಂತ ಘಮಘಮಿಸುವ ಉತ್ಕೃಷ್ಟ ದರ್ಜೆಯ ಕಾಫಿಯನ್ನು ಜಿಲ್ಲೆಯಲ್ಲಿ ಉತ್ಪಾದಿಸುವಲ್ಲಿ ಕಾರ್ಮಿಕರು, ನೌಕರರು, ಆಡಳಿತ ವರ್ಗ ಹಾಗೂ ಮಾಲೀಕರ ಪರಿಶ್ರಮ ಕಾರಣ. ಸಂಘವು ಕಳೆದ 5 ದಶಕಗಳಿಂದ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಕಾಫಿ, ಟೀ ಮತ್ತು ರಬ್ಬರ್ ತೋಟಗಳ ಎಲ್ಲಾ ಸಿಬ್ಬಂದಿಗೆ ಪ್ರತಿ 3 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಯ ಒಪ್ಪಂದವನ್ನು ಮಾಡುತ್ತಾ ಬಂದಿದೆ. 2026ರಿಂದ ಹೊಸ ವೇತನ ಒಪ್ಪಂದಕ್ಕಾಗಿ ಎಲ್ಲರ ಸಲಹೆ ಸೂಚನೆ ಪಡೆದುಕೊಳ್ಳಲಾಗುತ್ತಿದೆ’ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಚೆರುವಾಳಂಡ ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ 20 ವರ್ಷಗಳಿಂದ ನೌಕರರ ಕ್ಷೇಮಾಭಿವೃದ್ಧಿಗೆ ಶ್ರಮಿಸಿದ್ದ ಮುರುಳಿ ಮೋಹನ್ ದಾಸ್ ಹಾಗೂ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಮುಂದಿನ ಅವಧಿಗೆ ಅಧ್ಯಕ್ಷರಾಗಿ ತಮ್ಮಯ್ಯ ಅವರನ್ನು ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕೆ.ಆರ್.ತುಳಸಿ ಮಾಲ ಹಾಗೂ ಶಾಂತಿ ನಾಣಯ್ಯ, ಕಾರ್ಯದರ್ಶಿಯಾಗಿ ಬಿ.ಡಿ.ಕುಶಾಲಪ್ಪ, ಸಹ ಕಾರ್ಯದರ್ಶಿಯಾಗಿ ಬಿ.ಎ.ರಾಜೇಶ್ ಅವರನ್ನು ಹಾಗೂ ಇತರ ಪದಾಧಿಕಾರಿಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ನಾನ್ ಸ್ಟಾಪ್ ಮತ್ತು ಸೂಪರ್ ವೈಸರ್ ವಿಭಾಗದ ಅಧ್ಯಕ್ಷರಾಗಿ ಕೆ.ಕೆ.ನಾಗೇಶ್, ಕಾರ್ಯದರ್ಶಿಯಾಗಿ ವಾಸು, ಸಹಕಾರ್ಯದರ್ಶಿಯಾಗಿ ನಾಯಕ್ ಮತ್ತು ಲಕ್ಷ್ಮಣ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.