ಮಡಿಕೇರಿ: ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಈಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಆಯವ್ಯಯ ಮೇಲಿನ ಪೂರ್ವಭಾವಿ ಚರ್ಚೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಮುಖರು ಪಾಲ್ಗೊಂಡು, ಕಾಫಿ ಬೆಳೆಗಾರರ ಸಮಸ್ಯೆಗೆ ಬಜೆಟ್ನಲ್ಲಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು. ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗೆ ಕೂಲಂಕಷವಾಗಿ ಮನವರಿಕೆ ಮಾಡಿಕೊಡಲಾಯಿತು.
ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್ ಅವರು, ಕಾಫಿ ಬೆಳೆಗಾರರ ಹಲವಾರು ಬೇಡಿಕೆ ಮುಖ್ಯಮಂತ್ರಿ ಮುಂದೆ ಮಂಡಿಸಿ ಸೂಕ್ತ ಪರಿಹಾರ ಕಾರ್ಯಕ್ರಮಗಳ ಯೋಜನೆ ಜಾರಿಗೊಳಿಸುವಂತೆ ಮನವಿ ಮಾಡಿದರು.
10 ಅಶ್ವಶಕ್ತಿ ವಿದ್ಯುಚ್ಚಕ್ತಿ ಪಂಪ್ಸೆಟ್ ಹೊಂದಿರುವ ಕಾಫಿ ಬೆಳೆಗಾರರನ್ನು ಎಲ್ಟಿ–4‘ಸಿ’ನಿಂದ ಎಲ್ಟಿ–4‘ಎ’ಗೆ ಸೇರ್ಪಡೆಗೊಳಿಸಿ, ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಬೇಕು. 10 ಎಚ್.ಪಿವರೆಗಿನ ಪಂಪ್ಸೆಟ್ ಹೊಂದಿರುವ ಕಾಫಿ ಬೆಳೆಗಾರರು ಅತಿಸಣ್ಣ ಬೆಳೆಗಾರರಾಗಿದ್ದು, ಹವಾಮಾನ ವೈಪರೀತ್ಯ, ಕಾಫಿಯಲ್ಲಿ ಗುಣಪಡಿಸಲಾಗದ ರೋಗಬಾಧೆ, ಬೆಲೆಕುಸಿತ, ಕುಂಠಿತ ಉತ್ಪಾದನೆ ಮುಂತಾದ ಸಮಸ್ಯೆಗಳಿಂದ ಕಾಫಿ ಬೆಳೆಗಾರರು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಕಾಫಿ ಬೆಳೆಗೆ ಕೇವಲ ವರ್ಷದಲ್ಲಿ 1-3 ತಿಂಗಳ ಕಾಲ ಕಾಫಿಹೂವಿಗಾಗಿ ನೀರಾವರಿ ಪಂಪ್ಸೆಟ್ ಹೊಂದಿದ್ದು, ವಿದ್ಯುತ್ ಶುಲ್ಕವನ್ನು ಭರಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ, ಬೆಳೆಗಾರರ ಹಿತದೃಷ್ಟಿಯನ್ನು ಪರಿಗಣಿಸಿ, ಸೂಕ್ತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಕಾಫಿ ಬೆಳೆಗಾರರನ್ನು ಆಥಿ೯ಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಕೋರಿದರು.
ಕನಾ೯ಟಕ ಬೆಳೆಗಾರರ ಒಕ್ಕೂಟವು ಕಾಫಿ ಬೆಳೆಗಾರರ ಹಿತದೃಷ್ಟಿಯಿಂದ ನೀಡಿರುವ ಹಲವಾರು ಮಹತ್ವದ ಬೇಡಿಕೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ರೈತರ ಪರವಾಗಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು ಎಂದು ಕನಾ೯ಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್, ಪ್ರಧಾನ ಕಾರ್ಯದಶಿ೯ ಮುರಳೀಧರ್ ಎಸ್. ಬಕ್ಕರವಳ್ಳಿ ತಿಳಿಸಿದ್ದಾರೆ.
ಉಪಾಧ್ಯಕ್ಷ ಎನ್.ಬಿ.ಉದಯ್ ಕುಮಾರ್, ಸಂಘಟನಾ ಕಾರ್ಯದರ್ಶಿ ಎಚ್.ಎಚ್.ಉದಯ್,ಕೋಮಾರ್ಕ್ನ ಮಾಜಿ ಅಧ್ಯಕ್ಷ ಡಿ.ಎಸ್.ರಘು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.