ಮಡಿಕೇರಿ: ಭೂಮಿಯ ಒಳಗೆ ಬಚ್ಚಿಟ್ಟಿದ್ದ 240 ಗ್ರಾಂ ಗಾಂಜಾವನ್ನು ಕೊಡಗು ಜಿಲ್ಲಾ ಪೊಲೀಸ್ ಘಟಕದ ಶ್ವಾನದಳದ ‘ಕಾಪರ್’ ಎಂಬ ಶ್ವಾನವು ಭಾನುವಾರ ಪತ್ತೆ ಹಚ್ಚಿದ್ದು, ಆರೋಪಿ ಬಸವರಾಜು (37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡಹೊಸೂರು ಗ್ರಾಮದ ಆರೋಪಿಯು ಕುಶಾಲನಗರದ ಬಸವನಹಳ್ಳಿ ಸಮೀಪದ ತೆಪ್ಪದಕಂಡಿ ಎಂಬಲ್ಲಿಗೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಎಂಬ ಸುಳಿವು ದೊರೆಯಿತು. ತಕ್ಷಣವೇ ದಾಳಿ ನಡೆಸಿ ದ್ವಿಚಕ್ರ ವಾಹನ ಸಮೇತ ಒಂದಿಷ್ಟು ಗಾಂಜಾವನ್ನು ಆತನಿಂದ ವಶಪಡಿಸಿಕೊಳ್ಳಲಾಯಿತು. ಬಳಿಕ ಅನುಮಾನದ ಮೇರೆಗೆ ದೊಡ್ಡಹೊಸೂರಿನ ಈತನ ಮನೆಯ ಮೇಲೆ ದಾಳಿ ನಡೆಸಲಾಯಿತು. ಆಗ ಮಾದಕದ್ರವ್ಯ ಪತ್ತೆ ಕುರಿತ ಪರಿಣತಿ ಪಡೆದಿದ್ದ ‘ಕಾಪರ್’ ಎಂಬ ಶ್ವಾನವು ಮನೆಯಲ್ಲೆಲ್ಲ ಹುಡುಕಾಡಿ, ಕೊನೆಗೆ ಮನೆಯ ಶೌಚಾಲಯದ ಹಿಂಭಾಗ ಭೂಮಿಯಲ್ಲಿ ಬಚ್ಚಿಟ್ಟಿದ್ದ ಗಾಂಜಾವನ್ನು ಪತ್ತೆ ಹಚ್ಚಿತು. ಒಟ್ಟು ಆರೋಪಿಯಿಂದ 245 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಾಸವಾಗಿದ್ದ ಪಿರಿಯಾಪಟ್ಟಣದ ದೊಡ್ಡಹೊಸೂರಿನಿಂದ ಕಬ್ಬಿಣದ ಸೇತುವೆ ಮೂಲಕ ಎರಡೂವರೆ ಕಿ.ಮೀ ಕ್ರಮಿಸಿದರೆ ಕುಶಾಲನಗರದ ತೆಪ್ಪದಕಂಡಿಗೆ ಬಂದು ಸುಲಭವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಎಂದು ಅವರು ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಶ್ವಾನ ‘ಕಾಪರ್’ನ ನಿರ್ವಾಹಕ ಬಿ.ಪಿ.ಮನಮೋಹನ್, ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಸಿಪಿಐ ಕೆ.ರಾಜೇಶ್, ಪಿಎಸ್ಐ ಮೋಹನ್ರಾಜು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.