ADVERTISEMENT

ದಕ್ಷಿಣದ ಪ್ರಯಾಗ ಭಾಗಮಂಡಲ: ಕಣ್ಮನ ಸೆಳೆಯುವ ಧಾರ್ಮಿಕ ಕ್ಷೇತ್ರ

ತೀರ್ಥೋದ್ಭವಕ್ಕೆ ನಡೆದಿದೆ ದಿನಗಣನೆ. ಭಾಗಮಂಡಲ, ತಲಕಾವೇರಿಯಲ್ಲಿ ನಡೆದಿದಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 6:34 IST
Last Updated 14 ಅಕ್ಟೋಬರ್ 2025, 6:34 IST
ಭಾಗಮಂಡಲದ ಭಗಂಡೇಶ್ವರ ದೇವಾಲಯ
ಭಾಗಮಂಡಲದ ಭಗಂಡೇಶ್ವರ ದೇವಾಲಯ   

ನಾಪೋಕ್ಲು: ಅ.17ರಂದು ನಡೆಯಲಿರುವ ಕಾವೇರಿ ಪವಿತ್ರ ತೀರ್ಥೋದ್ಭವಕ್ಕಾಗಿ ತಲಕಾವೇರಿ ಕ್ಷೇತ್ರ ಜಾತ್ರೆಗೆ ಸನ್ನದ್ಧವಾಗುತ್ತಿದ್ದರೆ, ಇತ್ತ ತಲಕಾವೇರಿಯಿಂದ 8 ಕಿ.ಮೀ ದೂರದಲ್ಲಿರುವ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಒಂದು ತಿಂಗಳಿನಿಂದಲೂ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು ಜಾತ್ರೆಯ ಸಂಭ್ರಮ ಗರಿಗೆದರಿದೆ.

ಹಸಿರು ಹೊದ್ದು ನಿಂತ ಬೆಟ್ಟಗುಡ್ಡಗಳ ಸುಂದರ ಪರಿಸರದ ನಡುವೆ ಇರುವ ಭಾಗಮಂಡಲಕ್ಕೆ ಕಾಲಿಡುವಾಲೇ ಕನ್ನಿಕೆ, ಕಾವೇರಿ, ಸುಜ್ಯೋತಿಗಳ ಸಂಗಮವಾದ ತ್ರಿವೇಣಿ ಸಂಗಮ ಕಾಣುತ್ತದೆ. ಕಾವೇರಿ ನದಿಯು ತಲಕಾವೇರಿಯಿಂದ ಮೂರು ಮೈಲು ಕೂಡಾ ಹರಿದಿಲ್ಲ ಎನ್ನುವಾಗಲೇ ಕನ್ನಿಕೆ ಜೊತೆಗೂಡುತ್ತಾಳೆ. ಇಲ್ಲಿ ಇನ್ನೊಂದು ನದಿ ಸುಜ್ಯೋತಿ ಗುಪ್ತಗಾಮಿನಿಯಾಗಿ ಬಂದು ಸೇರುತ್ತದೆ. ಈ ಸಂಗಮದಿಂದಾಗಿಯೇ ಭಾಗಮಂಡಲ ದಕ್ಷಿಣದ ಪ್ರಯಾಗ ಎಂದು ಪ್ರಖ್ಯಾತಿಯೂ ಆಗಿದೆ.

ಭಾಗಮಂಡಲಕ್ಕೆ ಭಗಂಡ ಕ್ಷೇತ್ರ ಎಂಬ ಹೆಸರು ಪುರಾಣ ಪ್ರಸಿದ್ಧ. ಭಗಂಡೇಶ್ವರ, ಸುಬ್ರಹ್ಮಣ್ಯ ಮತ್ತು ಮಹಾವಿಷ್ಣು ದೇಗುಲಗಳ ಸಂಕೀರ್ಣಗಳಿಂದ ಕೂಡಿರುವ ಭಗಂಡ ಕ್ಷೇತ್ರ ಮೊದಲ ಅಂಕಣದಲ್ಲಿ ಮಹಾಗಣಪತಿ ದೇವಾಲಯವಿದೆ. ಭಗಂಡೇಶ್ವರ ದೇಗುಲ ಕೇರಳದ ವಾಸ್ತುಶಿಲ್ಪದ ಹಾಗೆ ಕಟ್ಟಿರುವ ಗುಡಿ, ಅಗಲವಾದ ಮೆಟ್ಟಿಲುಗಳನ್ನೇರಿ ಹೆಬ್ಬಾಗಿಲನ್ನು ಹಾದು ಒಳಗೆ ಹೋದರೆ ದೊಡ್ಡ ಅಂಗಳ. ಅದರ ನಡುವಿನಲ್ಲಿ 4 ದಿಕ್ಕುಗಳಿಗೂ ಅಗ್ರಸಾಲೆಗಳಿರುವ ಭಗಂಡೇಶ್ವರ ದೇವಾಲಯ ಇದೆ.

ADVERTISEMENT

ಪುರಾತನ ದೇವಾಲಯ ಎನಿಸಿದ ಭಗಂಡೇಶ್ವರ ದೇಗುಲದ ನಿರ್ವಹಣೆ ಅಚ್ಚುಕಟ್ಟುತನದಿಂದ ಕೂಡಿದೆ. ದೀಪಸ್ತಂಭ ಅತ್ಯಾಕರ್ಷಕವಾಗಿದ್ದು, ಗಮನ ಸೆಳೆಯುತ್ತಿದೆ. ಮರದ ಸುಂದರ ಶಿಲ್ಪಗಳಲ್ಲದೇ, ವಸಂತ ಮಂಟಪವೂ ಆಕರ್ಷಕವಾಗಿದೆ.

ತೀರ್ಥೋದ್ಭವದ ದಿನ ಭಕ್ತಾದಿಗಳು ತ್ರಿವೇಣಿ ಸಂಗಮದಲ್ಲಿ ಮಿಂದು ಭಗಂಡೇಶ್ವರನ ದರ್ಶನ ಮಾಡಿ ಅನಂತರ ತಲಕಾವೇರಿಯತ್ತ ಸಾಗುತ್ತಾರೆ. ತಲಕಾವೇರಿಗೆ ಹೋಗಬೇಕೆಂದರೆ ಭಾಗಮಂಡಲಕ್ಕೆ ಬರಬೇಕು. ತಲಕಾವೇರಿಗೆ ಭಾಗಮಂಡಲದಿಂದ ರಸ್ತೆಯಲ್ಲಿ 8 ಕಿ.ಮೀ. ಅಂತರ. ನಡೆದೇ ಹೋಗುವುದಿದ್ದರೆ ಐದು ಕಿ.ಮೀ. ಅಂತರದ ಅಡ್ಡ ರಸ್ತೆಯಲ್ಲಿ ಸಾಗಿಯೂ ತಲಕಾವೇರಿ ತಲುಪಬಹುದು.

ಭಾಗಮಂಡಲದ ಭಗಂಡೇಶ್ವರ ಸುಬ್ರಹ್ಮಣ್ಯ ಹಾಗೂ ಮಹಾವಿಷ್ಣು ದೇವಾಲಯಗಳ ಸಂಕೀರ್ಣ
ಜಾತ್ರೆಯ ಹಿನ್ನೆಲೆಯಲ್ಲಿ ಭಾಗಮಂಡಲದ ಭಗಂಡೇಶ್ವರ ದೇವಾಲಯವನ್ನು ಹಿಂದಿನ ವರ್ಷ ಹೂಗಳಿಂದ ಅಲಂಕರಿಸಿರುವುದು

ಸ್ಥಳ ಪುರಾಣ ಭಗಂಡ ಋಷಿಗಳು

ಸುಬ್ರಹ್ಮಣ್ಯ ದೇವರನ್ನು ತಪಸ್ಸು ಮಾಡಿ ಆತನನ್ನು ಒಲಿಸಿಕೊಂಡು ಅವನಿಂದಲೇ ಈ ಕ್ಷೇತ್ರವನ್ನು ಆಶೀರ್ವಾದವಾಗಿ ಪಡೆದುಕೊಂಡರು ಎಂದು ಪುರಾಣ ಹೇಳುತ್ತದೆ. ಅವರು ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ. ಇದರಿಂದಾಗಿ ಈ ಕ್ಷೇತ್ರ ಭಗಂಡೇಶ್ವರ ಎಂದು ಪ್ರಸಿದ್ಧವಾಗಿದೆ. ಟಿಪ್ಪು ಸುಲ್ತಾನನು ಭಾಗಮಂಡಲಕ್ಕೆ 1790ರಲ್ಲಿ ಮುತ್ತಿಗೆ ಹಾಕಿ ಭಾಗಮಂಡಲವನ್ನು ಅಬಜಲಬಾದ್ ಎಂದು ಹೆಸರಿಸಿದ್ದನು. ಅನಂತರ ಕೊಡಗಿನ ಅರಸನಾಗಿದ್ದ ದೊಡ್ಡವೀರರಾಜೇಂದ್ರ ಟಿಪ್ಪುವಿನಿಂದ ಭಾಗಮಂಡಲವನ್ನು ಮರಳಿ ಪಡೆದರು. ಭಾಗಮಂಡಲದ ದೇವಾಲಯವು ಕೇರಳ ವಾಸ್ತು ಶಿಲ್ಪ ಶೈಲಿಯನ್ನು ಹೋಲುವ ಶಿವ ಸುಬ್ರಹ್ಮಣ್ಯ ವಿಷ್ಣು ಮತ್ತು ಗಣಪತಿ ದೇವಾಲಯಗಳನ್ನು ಒಳಗೊಂಡಿದೆ. ಈ ದೇಗುಲಗಳು ಕ್ರಿ.ಶ. 11ನೇ ಶತಮಾನಕ್ಕೂ ಹಿಂದೆ ಚೋಳರು ನಿರ್ಮಿಸಿದ ಕಟ್ಟಡಗಳೆಂಬ ಪ್ರತೀತಿ ಇದೆ.

ಅಕ್ಷಯ ಪಾತ್ರೆ ಮತ್ತೊಂದು ವೈಶಿಷ್ಟ್ಯ

ಅಕ್ಷಯ ಪಾತ್ರೆ ಭಗಂಡೇಶ್ವರ ದೇವಾಲಯದ ಮತ್ತೊಂದು ವೈಶಿಷ್ಟ್ಯ. ಮರದ ವಿಶಾಲವಾದ ತೊಟ್ಟಿಯಾಗಿರುವ ಅಕ್ಷಯ ಪಾತ್ರೆಗೆ ತುಲಾ ಸಂಕ್ರಮಣದ ದಿನ ಮತ್ತು ಅದರ ಹಿಂದಿನ ದಿನ ಕೊಡಗಿನ ಭಕ್ತಜನ ಪಡಿಯಕ್ಕಿಯನ್ನು ತಂದು ಹಾಕುತ್ತಾರೆ. ಅಲ್ಲದೆ ದೇವಾಲಯಕ್ಕೆ ಭೇಟಿ ನೀಡುವ ಇತರ ಮಂದಿ ಅಕ್ಷಯ ಪಾತ್ರೆಯಿಂದ ಪಡಿಯಕ್ಕಿಯನ್ನು ಭಕ್ತಿಭಾವದಿಂದ ತಮ್ಮ ಮನೆಗಳಿಗೆ ಕೊಂಡೊಯ್ದು ಸಂತೃಪ್ತಿಯ ಭಾವ ಹೊಂದುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.