ADVERTISEMENT

ಪೊಲೀಸರ ಓಟಕ್ಕೆ ಜನ ಬೆಂಬಲ

ಮಡಿಕೇರಿಯಲ್ಲಿ 3.5 ಕಿ.ಮೀ ದೂರ ಓಡಿದ ಪೊಲೀಸರು, ಸಾರ್ವಜನಿಕರು, ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 6:27 IST
Last Updated 10 ಮಾರ್ಚ್ 2025, 6:27 IST
ಮಡಿಕೇರಿಯಲ್ಲಿ ಓಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭಾನುವಾರ ಹಸಿರುನಿಶಾನೆ ತೋರಿದರು
ಮಡಿಕೇರಿಯಲ್ಲಿ ಓಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭಾನುವಾರ ಹಸಿರುನಿಶಾನೆ ತೋರಿದರು   

ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸರು ಭಾನುವಾರ ಆಯೋಜಿಸಿದ್ದ ಓಟಕ್ಕೆ ನಗರದಲ್ಲಿ ಭರಪೂರ ಪ್ರತಿಕ್ರಿಯೆ ವ್ಯಕ್ತವಾಯಿತು. 10ಕ್ಕೂ ಅಧಿಕ ಶಾಲಾ ಕಾಲೇಜುಗಳು, ವಸತಿ ನಿಲಯಗಳ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 800ಕ್ಕೂ ಅಧಿಕ ಮಂದಿ 3.5 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ಖುಷಿಪಟ್ಟರು.

‘ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ’, ಉತ್ತಮ ದೇಹದಾರ್ಢ್ಯ ಕಾಯ್ದುಕೊಳ್ಳಬೇಕು ಎಂಬ ಸಂದೇಶ ಸಾರಿದರು.

ಜನರಲ್ ಕಾರ್ಯಪ್ಪ ವೃತ್ತದಿಂದ ಓಟ ಆರಂಭವಾಗುವ ಹೊತ್ತಿಗೆ ಬಿಸಿಲೇರಿತ್ತು. ‌ಹಳೆಯ ಖಾಸಗಿ ಬಸ್‌ನಿಲ್ದಾಣದ ಮೂಲಕ ಮೂರುವರೆ ಕಿ.ಮೀ ಸಾಗಿ ಜಿಲ್ಲಾ ಪೊಲೀಸ್ ಕವಾಯತು ಮೈದಾನ ತಲುಪಿದರು.

ADVERTISEMENT

ಇವರಲ್ಲಿ 1ನೇ ತರಗತಿ ಓದುವ ವಿದ್ಯಾರ್ಥಿಗಳಿಂದ ಹಿಡಿದು, ವೈದ್ಯಕೀಯ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳವರೆಗೆ ಇದ್ದರು. 6 ವರ್ಷ ವಯಸ್ಸಿನ ಬಾಲಕರಿಂದ ಹಿಡಿದು 86 ವರ್ಷದ ವಯಸ್ಸಿನ ಹಿರಿಯ ನಾಗರಿಕವರೆಗೆ, ತರಕಾರಿ ಮಾರಾಟ ಮಾಡುವವರಿಂದ ಹಿಡಿದು ದೊಡ್ಡ ಉದ್ಯಮಿಗಳವರೆಗೆ ಇದ್ದದ್ದು ವಿಶೇಷ ಎನಿಸಿತು.

ಶ್ವೇತವಸ್ತ್ರಧಾರಿಗಳಾಗಿ ಓಡುತ್ತಿದ್ದವರಿಗೆ ಸಿಪಿಐ ರಾಜು ಅವರು ಹಳೆಯ ಖಾಸಗಿ ಬಸ್‌ ನಿಲ್ದಾಣದ ಬಳಿ ಮೈಕ್‌ ಮೂಲಕ ಮಾರ್ಗದರ್ಶನ ತೋರಿದರು. ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದವರಿಗೆ ನೀರು ಮತ್ತು ತಂಪು ಪಾನೀಯ ವಿತರಿಸಿದರು.

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಹಂತ, ಕಾಲೇಜು ಹಂತ, ಮುಕ್ತ ಓಟ ಹೀಗೆ ನಾನಾ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದವರಿಗೆ ಪದಕಗಳನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು, ರಸ್ತೆ ಸುರಕ್ಷತೆಯ ನಿಯಮಗಳು, ಮಾದಕ ವಸ್ತು ವ್ಯಸನದಿಂದಾಗುವ ಪರಿಣಾಮಗಳು ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿಕ್ರಂ ಜಾದೂಗಾರ್ ಅವರ ಜಾದೂ ಪ್ರದರ್ಶನ, ನಿಷ್ಮಾ ಅವರ ಮೂಕಾಭಿನಯಗಳು ಗಮನ ಸೆಳೆದವು.‌ ಎಸ್.ಪಿ. ರಾಮರಾಜನ್, ಎಎಸ್‌ಪಿ ಸುಂದರ್‌ರಾಜ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೂ ಓಟದಲ್ಲಿ ಹೆಜ್ಜೆ ಹಾಕಿದರು.

ಕೊಡಗು ಪೊಲೀಸರು ಭಾನುವಾರ ಮಡಿಕೇರಿ ನಗರದಲ್ಲಿ ಏರ್ಪಡಿಸಿದ್ದ  ರಸ್ತೆಓಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಭಾನುವಾರ ಮಕ್ಕಳೊಂದಿಗೆ ಸಂವಾದ ನಡೆಸಿದರು

ಅಪಘಾತದಲ್ಲಿ 89 ಮಂದಿ ಸಾವು!

ಜಿಲ್ಲಾ ಪೊಲೀಸ್ ಕವಾಯತು ಮೈದಾನಕ್ಕೆ ಓಟವು ತಲುಪಿದ ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ‘ಕಳೆದ ವರ್ಷ ಜಿಲ್ಲೆಯಲ್ಲಿ ಅಪಘಾತದಿಂದ 89 ಮಂದಿ ಮೃತಪಟ್ಟಿದ್ದಾರೆ. ವರ್ಷದಲ್ಲಿ 1.40 ಲಕ್ಷ ಮಂದಿ ದೇಶದಲ್ಲಿ ಅಪಘಾತದಿಂದಲೇ ಮೃತಪಟ್ಟಿದ್ದಾರೆ. ಇಷ್ಟು ಮಂದಿಯ ಮೃತದೇಹಗಳನ್ನು ಮಡಿಕೇರಿಯಿಂದ ಮೈಸೂರಿನವರೆಗೂ ಸಾಲಾಗಿ ಜೋಡಿಸಿಡಬಹುದು. ಇಷ್ಟು ಮಂದಿಯನ್ನು ನಂಬಿಕೊಂಡಿರುವ ಅವರ ಕುಟುಂಬಸ್ಥರ ಪಾಡಂತೂ ತೀರಾ ಶೋಚನೀಯವಾಗಿದೆ’ ಎಂದು ಹೇಳಿದರು. ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವುದು ಅಪಘಾತಕ್ಕೆ ಪ್ರಮುಖ ಕಾರಣ. ಅದರೊಂದಿಗೆ ಅತಿ ವೇಗ ಮಕ್ಕಳು ವಾಹನ ಚಾಲನೆ ಮಾಡುವುದು ಸಂಚಾರ ನಿಯಮಗಳನ್ನು ಪಾಲನೆ ಮಾಡದೇ ಇರುವುದು ಹೆಲ್ಮೆಟ್ ಸೀಟ್‌ಬೆಲ್ಟ್ ಹಾಕದೇ ಇರುವುದು ಸಹ ಕಾರಣವಾಗಿದೆ ಎಂದು ಸಂಚಾರ ನಿಯಮಗಳನ್ನು ಕುರಿತು ಎಳೆಎಳೆಯಾಗಿ ಮಕ್ಕಳಿಗೆ ಹೇಳುವ ಮೂಲಕ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.