ಮಡಿಕೇರಿ: ಜಿಲ್ಲೆಯ ವಿವಿಧೆಡೆ ಗುರುವಾರ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದ್ದು ಕೊಡಗಿನಿಂದ ಕೇರಳ ಸಂಪರ್ಕಿಸುವ ಅಂತರ ರಾಜ್ಯ ಹೆದ್ದಾರಿಯಲ್ಲಿ ಗಾಳಿಗೆ ಬೃಹತ್ ಮರಬಿದ್ದು ಕೆಲವು ತಾಸು ಸಂಚಾರ ವ್ಯತ್ಯಯವಾಗಿತ್ತು.
ಎರಡು ಬದಿಯ ವಾಹನ ಸವಾರರು ಹೆದ್ದಾರಿಯಲ್ಲಿ ಸಿಲುಕಿಕೊಂಡು ಪರದಾಡಿದರು.
ಕಳೆದ ವರ್ಷ ಸುರಿದ ಮಹಾಮಳೆಗೆ ಇದೇ ಅಂತರ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿತ್ತು. ಮರಗಳ ಬೇರುಗಳು ಸಡಿಲಗೊಂಡಿದ್ದು ಸಾಧಾರಣ ಮಳೆ ಹಾಗೂ ಗಾಳಿಗೂ ಮರಗಳು ಉರುಳಿ ಬೀಳುತ್ತಿವೆ.
ಗುರುವಾರ ಸಂಜೆ 4 ಗಂಟೆಯ ಸುಮಾರಿಗೆ ಬೀಸಿದ ಗಾಳಿಗೆ ಮಾಕುಟ್ಟದ ಅಂಚೆ ಕಚೇರಿಯ ಬಳಿ ಬೃಹತ್ ಮರ ಬಿದ್ದು ನೂರಾರು ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು. ರಾತ್ರಿ ವೇಳೆಗೆ ಮರ ತೆರವು ಮಾಡಿ ಪ್ರಯಾಣಿಕರನ್ನು ಕಳುಹಿಸಲಾಯಿತು.
ಸೋಮವಾರಪೇಟೆ ತಾಲ್ಲೂಕಿನ ಕುಂಬೂರು, ಮಾದಾಪುರ, ಚಟ್ಟಳ್ಳಿ, ಸುಂಟಿಕೊಪ್ಪ, ಗರಗಂದೂರು, ಹರದೂರು ಹಾಗೂ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ವ್ಯಾಪ್ತಿಯಲ್ಲಿ ಒಂದು ತಾಸು ಮಳೆ ಅಬ್ಬರಿಸಿ ತಂಪೆರೆಯಿತು.
ಮಡಿಕೇರಿ ನಗರ, ನಾಪೋಕ್ಲು, ಭಾಗಮಂಡಲ, ಕಾಟಕೇರಿ, ಅಪ್ಪಂಗಳ, ಚೇರಂಬಾಣೆ, ಕರ್ಣಂಗೇರಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.