ADVERTISEMENT

ಕೊಡಗು: ತಗ್ಗಿದ ಮಳೆ, ಮುಂದುವರಿದ ಹಾನಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:52 IST
Last Updated 1 ಜೂನ್ 2025, 15:52 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾನುವಾರ ಮಳೆ ತಗ್ಗಿದೆ. ರಸ್ತೆ, ತಡೆಗೋಡೆ ಕುಸಿತ ಮುಂದುವರಿದಿದೆ.

ತಾಲ್ಲೂಕಿನ ಪೆರಾಜೆ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಅಮೆಚೂರು–ಕೋಟೆ ಪೆರಾಜೆ– ಕುಂಬಳಚೇರಿ ಕೂಡು ರಸ್ತೆಯ ತಡೆಗೋಡೆ ಕುಸಿದಿದೆ. ಇದೇ ರಸ್ತೆಯಲ್ಲಿ ಒಟ್ಟು 5 ಕಡೆ ಮಣ್ಣು ಕುಸಿದಿದೆ.

ADVERTISEMENT

ಸೋಮವಾರಪೇಟೆ ತಾಲ್ಲೂಕಿನ ಹಲವೆಡೆ ಭಾನುವಾರ ಸಂಜೆಯ ನಂತರ ಮಳೆ ಬಿದ್ದಿತು. ಹಾರಂಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನೀರಿನ ಮಟ್ಟ ಮತ್ತೆ ಒಂದಡಿ ಏರಿಕೆಯಾಗಿದೆ. 2,859 ಅಡಿ ಗರಿಷ್ಠ ಮಟ್ಟದ ಈ ಜಲಾಶಯದಲ್ಲಿ ಸದ್ಯ 2,849.85 ಅಡಿ ನೀರು ಸಂಗ್ರಹವಾಗಿದೆ. 3,164 ಕ್ಯೂಸೆಕ್‌ ಒಳಹರಿವು ಇದೆ.

ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ವಿರಾಜಪೇಟೆ ವ್ಯಾಪ್ತಿಯಲ್ಲಿ ಮನೆಯಿಂದ ಹಾನಿಯಾದ ಪ್ರದೇಶಗಳನ್ನು ಭಾನುವಾರ ವೀಕ್ಷಿಸಿದರು. ‘ಮುಂದಿನ ದಿನಗಳಲ್ಲಿ ಅಧಿಕ ಮಳೆಯಾಗುವ ಸಂಭವವಿದ್ದು, ಎಚ್ಚರ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

 ಇಬ್ಬರ ಶವ ಪತ್ತೆ (ಹಾಸನ ವರದಿ): ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಇಬ್ಬರು ಸಾವಿಗೀಡಾಗಿದ್ದಾರೆ. ಸಕಲೇಶಪುರ ತಾಲ್ಲೂಕಿನ ತಿನಗನಹಳ್ಳಿಯಲ್ಲಿ ನಂಜಯ್ಯ (56) ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ನಂಜಯ್ಯ ಮೇ 26ರಂದು ಜಮೀನಿಗೆ ತೆರಳಿ ಕಾಣೆಯಾಗಿದ್ದರು. ನಿರಂತರ ಮಳೆಯಿಂದ ಶೋಧಕ್ಕೆ ಅಡಚಣೆಯಾಗಿತ್ತು. ಮಳೆ ಕಡಿಮೆಯಾದ ಬಳಿಕ ಹುಡುಕಾಟ ನಡೆಸಿದ್ದು, ಶನಿವಾರ ಸಂಜೆ ತಿನಗನಹಳ್ಳಿಯಲ್ಲಿ ಅವರ ಶವ ಪತ್ತೆಯಾಗಿದೆ.

ನಂಜಯ್ಯನವರ ಹುಡುಕಾಟದ ವೇಳೆ ಚಿಕ್ಕಮಗಳೂರು ಜಿಲ್ಲೆಯ ಕಲ್ಲುದೊಡ್ಡಿ ಗ್ರಾಮದ ಕಾರ್ಮಿಕ ಮುರುಗೇಶ್ (65) ಶವವೂ ಪತ್ತೆಯಾಗಿದ್ದು, ಕಾಫಿ ತೋಟದಲ್ಲಿ ಕೆಲಸ ಮಾಡುವ ವೇಳೆ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ಎರಡೂ ಘಟನೆಗಳು ಸಕಲೇಶಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ.

ಮೂಡುಬಿದಿರೆ (ದಕ್ಷಿಣ ಕನ್ನಡ): ವಾಲ್ಪಾಡಿ ಗ್ರಾಮದ ಕಟ್ಟದಡಿ ಕಿಂಡಿ ಅಣೆಕಟ್ಟೆಯಿಂದ ಆಕಸ್ಮಿಕವಾಗಿ ಬಿದ್ದು ನೀರುಪಾಲಾಗಿದ್ದ ಗುರುಪ್ರಸಾದ್ ಭಟ್ (36) ಅವರ ಶವ ಭಾನುವಾರ ಸಂಜೆ ಶಿರ್ತಾಡಿ ಗೇಂದೊಟ್ಟು ಬಳಿ ಪತ್ತೆಯಾಗಿದೆ.

ಈಶ್ವರ್ ಮಲ್ಪೆ ತಂಡದ ಮುಳುಗು ತಜ್ಞರು ಶೋಧ ಕಾರ್ಯ ನಡೆಸಿ ಶವವನ್ನು ಪತ್ತೆ ಹಚ್ಚಿ ಮೇಲೆ ತಂದಿದ್ದಾರೆ. ಈ ಸ್ಥಳ ದುರಂತ ನಡೆದ ಕಟ್ಟದಡಿಯಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. ಶುಕ್ರವಾರ ಸಂಜೆ ಗುರುಪ್ರಸಾದ್ ಅವರು ಕಿಂಡಿ ಅಣೆಕಟ್ಟೆಯ ಹಲಗೆ ತೆಗೆಯುವ ವೇಳೆ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.