ADVERTISEMENT

ರೈತಮಿತ್ರ ಕೂಟಕ್ಕೆ ಭರ್ಜರಿ ಜಯ

ಮಡಿಕೇರಿ: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 6:13 IST
Last Updated 11 ನವೆಂಬರ್ 2020, 6:13 IST

ಮಡಿಕೇರಿ: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ಮಡಿಕೇರಿ ಕೊಡವ ಸಮಾಜದಲ್ಲಿ ನಡೆಯಿತು. ಒಟ್ಟು 17 ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ರೈತ ಮಿತ್ರಕೂಟಕ್ಕೆ ಭರ್ಜರಿ ಜಯ ಸಿಕ್ಕಿದೆ.

ಮಡಿಕೇರಿ ತಾಲ್ಲೂಕಿನ ಐದು ಸಾಮಾನ್ಯ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಸೂದನ ಎಸ್. ಈರಪ್ಪ ಅವರಿಗೆ 187 ಮತಗಳು, ಕೋಳುಮುಡಿಯನ ಅನಂತಕುಮಾರ್‌ಗೆ 166 ಮತಗಳು, ಕುಂಬುಗೌಡನ ವಿನೋದ್ ಕುಮಾರ್‌ಗೆ 149, ಮಂದ್ರೀರ ಜಿ. ಮೋಹನ್‍ದಾಸ್ 148, ಅಜ್ಜಿನಂಡ ಎಂ. ಗೋಪಾಲಕೃಷ್ಣ 118 ಮತಗಳನ್ನು ಪಡೆದು ಗೆಲುವು ಪಡೆದಿದ್ದಾರೆ. ಇವರಿಗೆ ಪೈಪೋಟಿ ನೀಡಿದ ಬೆಪ್ಪುರನ ಎಂ. ಬೋಪಯ್ಯ 113, ಚೊಂಡಿರ ಚಂಗಪ್ಪ 94, ಪಟ್ಟಡ ಎಂ. ಉಲ್ಲಾಸ 68, ಚೆನಂಡ ಗಿರೀಶ್ ಪೂಣಚ್ಚ 68, ಕೇಕಡ ಎಂ. ಗಿರೀಶ್ 68, ಮಂಡುವಂಡ ಬಿ. ಜೋಯಪ್ಪ 38 ಮತಗಳನ್ನು ಪಡೆದರು. ಇಲ್ಲಿ
ಐದು ಸ್ಥಾನಗಳಿಗೆ 11 ಮಂದಿ ಸ್ಪರ್ಧಿಸಿದರು.

ತೀವ್ರ ಪೈಪೋಟಿ ಇದ್ದ ಸೋಮವಾರಪೇಟೆಯಲ್ಲಿ ಮೂರು ಸ್ಥಾನಗಳಿಗೆ ಆರು ಮಂದಿ ಕಣದಲ್ಲಿದ್ದರು. ಕೆ.ಕೆ.ಗೋಪಾಲ 158, ಸಿ.ಸಿ. ವಿಜಯ ಕುಮಾರ್ 145, ಬಿ.ಈ.ಬೋಪಯ್ಯ ಅವರು 143 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಸೋಲುಕಂಡ ರಾಜು ಸಿ. ದಳವಾಯಿ 138, ಸಿ.ಎನ್. ತಮ್ಮಯ್ಯ 111, ಎ.ಎಚ್. ರವಿ 98 ಮತಗಳನ್ನು ಪಡೆದರು. ಹಾಲಿ ಅಧ್ಯಕ್ಷ ಬಿ.ಈ.ಬೋಪಯ್ಯ ಅವರು ಗೆಲುವು ಸಾಧಿಸಿದರು.

ADVERTISEMENT

ವಿರಾಜಪೇಟೆ ಕ್ಷೇತ್ರದ ಮೂರು ಸ್ಥಾನಗಳಿಗೆ ಐದು ಮಂದಿ ಸ್ಪರ್ಧಿಸಿದ್ದು, ಮಿತ್ರ ಕೂಟದಿಂದ ಎಸ್.ಎಸ್. ಸುರೇಶ್, ಕೊಣಿಯಂಡ ಬೋಪಣ್ಣ, ಪೆಮ್ಮಂಡ ಬೋಪಣ್ಣ ಅವಿರೋಧವಾಗಿ ಆಯ್ಕೆಯಾದರು. ಮಾಜಿ ಅಧ್ಯಕ್ಷ ಚೊಟು ಕಾವೇರಿ, ಮಾಜಿ ನಿರ್ದೇಶಕ ಚಂಗಪ್ಪ ಅವರು ನಾಮಪತ್ರ ವಾಪಸ್‌ ಪಡೆದಿದ್ದರು. ಮಹಿಳಾ ಮಿಸಲು ಸ್ಥಾನದ ಎರಡು ಸ್ಥಾನಗಳಿಗೆ ನಾಲ್ಕು ಮಂದಿ ಸ್ಪರ್ಧಿಸಿದ್ದು, ಪರಿವಾರ ಎಸ್. ಕವಿತಾ 306, ಅಂಬೆಕಲ್ಲು ಸುಶೀಲಾ ಕುಶಾಲಪ್ಪ 301 ಮತಗಳನ್ನು ಪಡೆದು ಗೆಲುವು ಕಂಡರು. ಪರಾಜಿತರಾದ ಯಾಲದಾಳು ಸಾವಿತ್ರಿ 234, ಎಚ್.ಡಿ. ಹೇಮಂತ ಕುಮಾರಿ 219 ಮತಗಳನ್ನು ಪಡೆದರು.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬೊಳ್ಳು ಎ. ಹರಿಜನ 294 ಮತ ಪಡೆದು ಗೆಲುವು ಕಂಡು, ಎಚ್.ಈ. ರಾಜು 253 ಮತ ಪಡೆದು ಸೋಲನ್ನಪ್ಪಿದರು.

ಬಿ.ಸಿ.ಎಂ (ಬಿ) ಕ್ಷೇತ್ರದಿಂದ ಪೇರಿಯನ ಪಿ.ಉದಯ ಕುಮಾರ್ ಹಾಗೂ ಹಾಲಿ ನಿರ್ದೇಶಕರಾಗಿದ್ದ ಅಯ್ಯಣ್ಣ ನಾಮಪತ್ರ ಸಲ್ಲಿಸಿ ವಾಪಸ್‌ ಪಡೆದರು. ಉದಯ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಬಿಸಿಎಂ (ಎ) ಕ್ಷೇತ್ರದಿಂದ ಹಾಲಿ ನಿರ್ದೇಶಕ ಬಿದ್ದಿಯಂಡ ಗಣಪತಿ ಹಾಗೂ ಹಾಲಿ ನಿರ್ದೇಶಕ ಬಿ.ಸಿ.ಚೆನ್ನಪ್ಪ ನಾಮಪತ್ರ ಸಲ್ಲಿಸಿದ್ದು, ಬಿದ್ದಿಯಂಡ ಗಣಪತಿ ನಾಮಪತ್ರ ವಾಪಸ್‌ ಪಡೆದಿದ್ದರಿಂದ ಬಿ.ಸಿ. ಚೆನ್ನಪ್ಪ ಅವಿರೋಧ ಆಯ್ಕೆಯಾದರು.

ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ ರೈತ ಮಿತ್ರ ಕೂಟದ ಪ್ರಮುಖ ಸೂದನ ಈರಪ್ಪ, ‘ಸಾಮಾನ್ಯವಾಗಿ ಸಹಕಾರ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳಲ್ಲಿ ಅಧಿಕಾರಕ್ಕಾಗಿ ಗುಂಪುಗಾರಿಕೆ ನಡೆಯುತ್ತದೆ. ಇದು ಸಂಘದ ಪ್ರಗತಿಗೆ ಹಾಗೂ ರೈತಾಪಿ ವರ್ಗಕ್ಕೆ ಆಗುವ ಅನ್ಯಾಯ. ಆದರೆ, ಕೂಟದ ಅಭ್ಯರ್ಥಿಗಳಲ್ಲಿ ಎಲ್ಲೂ ಕೂಡ ರಾಜಕೀಯ ಹಾಗೂ ಜಾತಿಯ ಸೋಂಕು ತಟ್ಟದಂತೆ ಎಚ್ಚರವಹಿಸಲಾಗಿದೆ. ಈ ಮೂಲಕ 17 ಸ್ಥಾನಗಳಲ್ಲಿ 15ನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲೂ ಸಹಕಾರಿ ಕ್ಷೇತ್ರದ ಚುನಾವಣೆಗಳಲ್ಲಿ ರೈತ ಮಿತ್ರ ಕೂಟ ಯಶಸ್ಸನ್ನು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.