ಮಡಿಕೇರಿ: ರಾಜ್ಯದ ಗಡಿಭಾಗದಲ್ಲಿನಕ್ಸಲ್ ಚಟುವಟಿಕೆ ನಡೆಸಿದ್ದ ಆರೋಪದ ಬಂಧಿತನಾಗಿರುವ ಶಂಕಿತ ನಕ್ಸಲ್ ನಾಯಕರೂಪೇಶ್ನನ್ನು ಬುಧವಾರ ಇಲ್ಲಿನ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಕೇರಳದ ವೈವೂರು ಕಾರಾಗ್ರಹದಲ್ಲಿರುವ ರೂಪೇಶ್ನನ್ನು ಕೇರಳ ಹಾಗೂ ಕೊಡಗು ನಕ್ಸಲ್ ನಿಗ್ರಹ ಪಡೆಯ ಭದ್ರತೆಯಲ್ಲಿ ಕರೆತಂದು ನ್ಯಾಯಾಧೀಶ ವೀರಭದ್ರಪ್ಪ ವಿ. ಮಲ್ಲಾಪುರೆ ಎದುರು ಹಾಜರು ಪಡಿಸಲಾಯಿತು.
ಹೇಳಿಕೆ ಪಡೆದ ಬಳಿಕ ಏ. 27ಕ್ಕೆ ವಿಚಾರಣೆ ಮುಂದೂಡಲಾಯಿತು. ಕೋರ್ಟ್ ಆವರಣಕ್ಕೆ ಬರುತ್ತಿದ್ದಂತೆಯೇ ರೂಪೇಶ್, ನಕ್ಸಲ್ ಪರವಾದ ಘೋಷಣೆ ಕೂಗಿದ.
ಜಿಲ್ಲೆಯ ಮುಂಡ್ರೋಡು ಅರಣ್ಯ ಪ್ರದೇಶದಲ್ಲಿ (2010) ರೂಪೇಶ್ ನೇತೃತ್ವದ ಶಂಕಿತ ನಕ್ಸಲ್ ತಂಡವು ಪ್ರತ್ಯಕ್ಷವಾಗಿತ್ತು. ಅಲ್ಲದೇ ಕಾಲೂರು, ಬಿರುನಾಣಿ ಸಮೀಪದ ಪರಕಟಗೇರಿ ಹಾಗೂ ಭಾಗಮಂಡಲ ಸಮೀಪದ ಚೇರಂಬಾಣೆಯಲ್ಲಿ ಈ ಶಂಕಿತ ತಂಡವು ಪ್ರತ್ಯಕ್ಷವಾಗಿತ್ತು ಎಂಬ ಆರೋಪವಿದೆ. ಗಡಿಭಾಗದ ಕೆಲವು ಮನೆಗಳಿಗೂ ಈ ತಂಡವು ಭೇಟಿ ನೀಡಿ ಆಹಾರ ಪದಾರ್ಥ ಸಂಗ್ರಹ ಮಾಡಿ ಹಾಗೂನಕ್ಸಲ್ ಪರ ಕರಪತ್ರ ಹಂಚಿಕೆ ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದರ ವಿಚಾರಣೆಯು ಮಡಿಕೇರಿ ಕೋರ್ಟ್ನಲ್ಲಿ ನಡೆಯುತ್ತಿದ್ದು, ಬಂಧನದ ಬಳಿಕ 5ನೇ ಬಾರಿಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಏ. 10ರಂದೂ ವಿಚಾರಣೆ ನಡೆದಿತ್ತು. ವಿಚಾರಣೆ ಬಳಿಕ ಕೇರಳದ ಕಾರಾಗೃಹಕ್ಕೆ ಭದ್ರತೆಯಲ್ಲಿ ಕರೆದೊಯ್ಯಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.