ADVERTISEMENT

ಶಾಲಾ ಆಟದ ಮೈದಾನ ಅಭಿವೃದ್ಧಿಗೆ ₹ 2 ಕೋಟಿ: ಶಾಸಕ ಎ.ಎಸ್.ಪೊನ್ನಣ್ಣ

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ: ವಿರಾಜಪೇಟೆ ವ್ಯಾಪ್ತಿಯ 8 ಹೋಬಳಿ ಕೇಂದ್ರದಲ್ಲಿ ಜಾರಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 16:01 IST
Last Updated 18 ಸೆಪ್ಟೆಂಬರ್ 2024, 16:01 IST
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕ್ರೀಡಾಪಟುಗಳನ್ನು ಪರಿಚಯ ಮಾಡಿಕೊಂಡರು
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕ್ರೀಡಾಪಟುಗಳನ್ನು ಪರಿಚಯ ಮಾಡಿಕೊಂಡರು   

ಮಡಿಕೇರಿ: ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಬಾಸ್ಕೇಟ್‌ಬಾಲ್... ಹೀಗೆ ಹಲವು ಆಟೋಟಗಳಲ್ಲಿ ಜಿಲ್ಲೆಯ ಸುಮಾರು 500 ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.

ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿ ಜನತಾ ಪ್ರೌಢಶಾಲೆಯಲ್ಲಿ ಬುಧವಾರ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆಯಿಂದ ನಡೆದ ಕೊಡಗು ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದಲ್ಲಿ ಹೆಚ್ಚಿನ ಮಕ್ಕಳು ಭಾಗವಹಿಸಿದ್ದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಎ.ಎಸ್.ಪೊನ್ನಣ್ಣ, ‘ವಿರಾಜಪೇಟೆ ವಿಧಾನಸಭಾ ಕ್ಷೇತ್ರದ 8 ಹೋಬಳಿ ಕೇಂದ್ರದ ಶಾಲಾ ಆಟದ ಮೈದಾನವನ್ನು ಮೇಲ್ದರ್ಜೆಗೇರಿಸಲು ತಲಾ ₹ 25 ಲಕ್ಷ ಬಿಡುಗಡೆ ಮಾಡಲಾಗಿದೆ. ಒಟ್ಟು ₹ 2 ಕೋಟಿ ಮೊತ್ತದ ಈ ಹಣದಿಂದ ಕ್ಷೇತ್ರದ ಶಾಲಾ ಆಟದ ಮೈದಾನಗಳು ಅಭಿವೃದ್ಧಿ ಕಾಣಲಿವೆ’ ಎಂದು ಹೇಳಿದರು.

ADVERTISEMENT

‘ಈಗಾಗಲೇ ವಿರಾಜಪೇಟೆ ಮತ್ತು ಹುದಿಕೇರಿಯಲ್ಲಿ ಕಾಮಗಾರಿಗಳು ನಡೆದಿವೆ. ಉಳಿದ 6 ಆಟದ ಮೈದಾನದ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

‘ಕೊಡಗು ಜಿಲ್ಲೆಯಲ್ಲಿನ ಕ್ರೀಡಾ ಪರಂಪರೆಯನ್ನು ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಬೇಕು. ಗ್ರಾಮೀಣ ಪ್ರದೇಶದಲ್ಲಿ ಇನ್ನಷ್ಟು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು’ ಎಂದು ಕರೆ ನೀಡಿದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್.ಗಾಯತ್ರಿ ಮಾತನಾಡಿ, ‘ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ವಿವಿಧ ರಂಗದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ‌ಪ್ರತಿಪಾದಿಸಿದರು.

ಹುದಿಕೇರಿ ಜನತಾ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಂ.ಅಶೋಕ್ ಮಾತನಾಡಿ, ‘ಆಟದ ಮೈದಾನಗಳು ಮಕ್ಕಳ ಕ್ರೀಯಾಶೀಲ ಚಟುವಟಿಕೆಗೆ ಅನುಕೂಲವಾಗಿವೆ. ಆ ನಿಟ್ಟಿನಲ್ಲಿ ಹುದಿಕೇರಿಯಲ್ಲಿ ಆಟದ ಮೈದಾನ ಅಭಿವೃದ್ಧಿಪಡಿಸಲಾಗಿದೆ’ ಎಂದು ಹೇಳಿದರು.

ಶಾಸಕ ಪೊನ್ನಣ್ಣ ಅವರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಂಡರು. ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಕ್ರೀಡಾ ಜ್ಯೋತಿ ಬೆಳಗಿದರು. ಕ್ರೀಡಾಪಟುಗಳಿಂದ ನಡೆದ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಹುದಿಕೇರಿಯ ಜನತಾ ಪ್ರೌಢಶಾಲೆ ವೀಕ್ಷಿಸಿದರು.

ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಪ್ಪಣಮಾಡ ನಿವ್ಯ ಕಾವೇರಮ್ಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಆರ್.ರವಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎ.ಪ್ರವೀಣ್, ಜಿಲ್ಲಾ ಅನುದಾನಿತ ಶಾಲಾ-ಕಾಲೇಜು ನೌಕರರ ಸಂಘದ ಅಧ್ಯಕ್ಷ ಪಿ.ಎ.ಪ್ರಭು ಕುಮಾರ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸದಾಶಿವ ಪಲ್ಲೇದ್, ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಎಚ್.ಎನ್.ಪಾರ್ವತಿ, ವಿರಾಜಪೇಟೆ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಪಿ.ಮಹೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಚೈತನ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಇ.ಸುರೇಂದ್ರ, ಅನುದಾನಿತ ಪ್ರೌಢಶಾಲಾ ಹಾಗೂ ಕಾಲೇಜು ನೌಕರರ ಸಂಘದ ಅಧ್ಯಕ್ಷ ಜಿ.ಗಿಡ್ಡಯ್ಯ, ದೈಹಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಡಾ.ಸೋಮಯ್ಯ, ಎಂ.ಎಸ್.ತಮ್ಮಯ್ಯ, ಕಿರಣ್ ಪಿ.ಎಂ., ಕೆ.ಜಿ.ಅಶೋಕ್, ಟಿ.ಎಸ್.ಮಹೇಶ್, ಹುದಿಕೇರಿ ಜನತಾ ಪ್ರೌಢಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಅಜ್ಜಿಕುಟ್ಟಿರ ಜಿ.ಗಣೇಶ್, ಮುಖ್ಯ ಶಿಕ್ಷಕಿ ಸಿ.ಕೆ.ಮೋಹನ್ ಕುಮಾರಿ, ದೈಹಿಕ ಶಿಕ್ಷಣ ಶಿಕ್ಷಕ ಸಿ.ವಿ.ಸುಬ್ರಮಣಿ ಭಾಗವಹಿಸಿದ್ದರು. 

ಕ್ರೀಡೆಗಳ ಫಲಿತಾಂಶ

ವಾಲಿಬಾಲ್‌ನಲ್ಲಿ ಪ್ರಾಥಮಿಕ ಬಾಲಕರ ವಿಭಾಗ ಮತ್ತು ಬಾಲಕಿಯರ ವಿಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು ಸಿದ್ದಾಪುರದ ಶಾಲೆಯ ತಂಡಗಳು ಪ್ರಥಮ ಸ್ಥಾನ ಪಡೆದವು. ಬಾಲಕರ ವಿಭಾಗದಲ್ಲಿ ಶ್ರೀಕೃಷ್ಣ ವಿದ್ಯಾಮಂದಿರ ಹಾಗೂ ಬಾಲಕಿಯರ ವಿಭಾದಲ್ಲಿ ಸಂಪಾಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಂಡಗಳು ದ್ವಿತೀಯ ಸ್ಥಾನ ಪಡೆದವು.

ಪ್ರೌಢಶಾಲಾ ವಿಭಾಗದ ಥ್ರೋಬಾಲ್‌ನ ಬಾಲಕರ ಮತ್ತು ಬಾಲಕಿಯರೂ ಎರಡೂ ವಿಭಾಗದಲ್ಲಿ ಗೋಣಿಕೊಪ್ಪಲಿನ ಸರ್ವದೈವತಾ ಆಂಗ್ಲ ಮಾಧ್ಯಮ ಶಾಲಾ ತಂಡಗಳು ಪ್ರಥಮ ಸ್ಥಾನ ಪಡೆದವು.

ಬಾಲಕರ ವಿಭಾಗದಲ್ಲಿ ಶಿರಂಗಾಲದ ಸರ್ಕಾರಿ ಪ್ರೌಢಶಾಲಾ ತಂಡ ಹಾಗೂ ಬಾಲಕಿಯರ ವಿಭಾಗದಲ್ಲಿ ನಂಜರಾಯಪಟ್ಟಣದ ಪ್ರೌಢಶಾಲಾ ತಂಡವು ದ್ವಿತೀಯ ಸ್ಥಾನ ಪಡೆದವು. ಪ್ರೌಢಶಾಲೆಯ ಕಬಡ್ಡಿ ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಕುಶಾಲನಗರದ ಜ್ಞಾನಭಾರತೀ ಶಾಲೆ ಪ್ರಥಮ ವಿರಾಜಪೇಟೆಯ ಕೂರ್ಗ್ ವ್ಯಾಲಿ ಶಾಲೆ ದ್ವಿತೀಯ ಸ್ಥಾನ ಪಡೆದವು.

ಬಾಲಕಿಯರ ವಿಭಾಗದಲ್ಲಿ ಕುಶಾಲನಗರದ ಸರ್ಕಾರಿ ಜೂನಿಯರ್ ಕಾಲೇಜಿನ ತಂಡ ಪ್ರಥಮ ವಿರಾಜಪೇಟೆಯ ಶ್ರೀಮಂಗಲ ಪ್ರೌಢಶಾಲಾ ತಂಡ ದ್ವಿತೀಯ ಸ್ಥಾನ ಪಡೆಯಿತು.

ಬಾಸ್ಕೆಟ್‌ಬಾಲ್‌ನ ಪ್ರಾಥಮಿಕ ಶಾಲಾ ಹಂತದ ಬಾಲಕರ ಮತ್ತು ಬಾಲಕಿರಯ ಎರಡೂ ವಿಭಾಗಗಳಲ್ಲೂ ಗೋಣಿಕೊಪ್ಪಲಿನ ಲಯನ್ಸ್ ಶಾಲೆ ಪ್ರಥಮ ಮಡಿಕೇರಿಯ ಸಂತ ಜೋಸೆಫರ ಶಾಲೆ ದ್ವಿತೀಯ ಸ್ಥಾನ ಪಡೆದವು.

ಬಾಸ್ಕೆಟ್‌ಬಾಲ್‌ನ ಪ್ರೌಢಶಾಲಾ ಹಂತದ ಬಾಲಕರ ವಿಭಾಗದಲ್ಲಿ ಕೂಡಿಗೆ ಮೊರಾರ್ಜಿ ಶಾಲೆ ಪ್ರಥಮ ಗೋಣಿಕೊಪ್ಪಲಿನ ಲಯನ್ಸ್ ಶಾಲೆ ದ್ವಿತೀಯ ಬಾಲಕಿಯರ ವಿಭಾಗದಲ್ಲಿ ವಿರಾಜಪೇಟೆಯ ಸೇಂಟ್ ಆ್ಯನ್ಸ್‌ ಪ್ರಥಮ ಮಡಿಕೇರಿಯ ಸಂತ ಜೋಸೆಫರ ಶಾಲೆ ದ್ವಿತೀಯ ಸ್ಥಾನ ಪಡೆದವು.

ಕೊಕೊ ಪ್ರಾಥಮಿಕ ಶಾಲಾ ಹಂತದ ಬಾಲಕರ ವಿಭಾಗದಲ್ಲಿ ಆಲೂರು ಸಿದ್ದಾಪುರದ ಮೊರಾರ್ಜಿ ದೇಸಾಯಿ ಶಾಲೆ ಪ್ರಥಮ ನಾಪೋಕ್ಲು ಅಂಬೇಡ್ಕರ್ ವಸತಿ ಶಾಲೆ ದ್ವಿತೀಯ ಬಾಲಕಿಯರ ವಿಭಾಗದಲ್ಲಿ ಆಲೂರು ಸಿದ್ದಾಪುರದ ಮೊರಾರ್ಜಿ ದೇಸಾಯಿ ಶಾಲೆ ಪ್ರಥಮ ಬೆಕ್ಕೆಸೊಡ್ಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.