ಸುಂಟಿಕೊಪ್ಪ (ಕೊಡಗು): ‘ಅಂತರ, ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿ ಆದಷ್ಟು ಶೀಘ್ರದಲ್ಲಿಯೇ ಶಾಲಾ-ಕಾಲೇಜು ಪುನರಾರಂಭ ಮಾಡಿದರೆ ಒಳ್ಳೆಯದು’ ಎಂದು ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ 8 ತಿಂಗಳಿಂದ ಮಕ್ಕಳು ಮನೆಯಲ್ಲಿಯೇ ಕುಳಿತು ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದು, ಅದನ್ನು ಸಮರ್ಪಕವಾಗಿ ವಿದ್ಯಾರ್ಥಿಗಳು ಬಳಸಿಕೊಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಬಡ ಕುಟುಂಬದಲ್ಲಿರುವ ಪೋಷಕರಿಗೆ ಮೊಬೈಲ್, ಟ್ಯಾಬ್, ಲ್ಯಾಪ್ಟ್ಯಾಪ್ಗಳಲ್ಲದೇ ಸರಿಯಾದ ನೆಟ್ವರ್ಕ್ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಕೋವಿಡ್ ಸಂಖ್ಯೆ ಇಳಿಮುಖವಾಗಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 2021ರಲ್ಲಾದರೂ ತರಗತಿ ಆರಂಭಿಸಲು ಸರ್ಕಾರ ಯೋಚನೆ ಮಾಡಲಿ’ ಎಂದರು.
ಶುಕ್ರವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದ ಸೋಲಿಗೆ ಬಿಜೆಪಿ- ಜೆಡಿಎಸ್ ನಡುವಿನ ಹೊಂದಾಣಿಕೆ ಮತ್ತು ನಮ್ಮವರೇ ನಮಗೆ ಚೂರಿ ಹಾಕಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಚಾಮುಂಡೇಶ್ವರಿ ಕ್ಷೇತ್ರದ ಜನ ಸಿದ್ದರಾಮಯ್ಯ ಅವರನ್ನು 4 ಬಾರಿ ಗೆಲ್ಲಿಸಿದ್ದಾರೆ. ಅಭಿವೃದ್ಧಿ ಮಾಡಲು 4 ವರ್ಷ ಸಾಕಾಗುವುದಿಲ್ಲವೇ? ಬಜೆಟ್ ಮಂಡಿಸಿದ ಅವರಿಗೆ ಅದರ ಅಭಿವೃದ್ಧಿಯ ಬಗ್ಗೆ ಆಲೋಚನೆ ಬರಲಿಲ್ಲವೇ? ಜನರಿಗೆ ಸುಳ್ಳು ಹೇಳಿಯೇ ಕಾಲ ಕಳೆದರು’ ಎಂದು ಲೇವಡಿ ಮಾಡಿದರು.
ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿದ ಸಿದ್ದರಾಮಯ್ಯ ಅವರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಅವರು ಒಬ್ಬ ರೈತ ಕುಟುಂಬದಿಂದ ಬಂದವರಾಗಿದ್ದು ಕುರಿ, ಕೋಳಿ, ಗೋವಿಗೂ ಬಹಳಷ್ಟು ವ್ಯತ್ಯಾಸವಿದೆ. ಆ ವ್ಯತ್ಯಾಸವನ್ನು ಅರಿತರೆ ಈ ದ್ವಂದ್ವ ಹೇಳಿಕೆಯನ್ನು ನೀಡಲ್ಲ’ ಎಂದು ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.