ಮಡಿಕೇರಿ: ಕೊಡಗು ಜಿಲ್ಲೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ನಗರಾಭಿವೃದ್ಧಿ ಇಲಾಖೆಯೊಂದಿಗೆ ಸಭೆ ನಿಗದಿ ಮಾಡುವಂತೆ ಪೌರಾಡಳಿತ ಸಚಿವ ರಹೀಮ್ ಖಾನ್ ಅಧಿಕಾರಿಗಳಿಗೆ ಸೂಚಿಸಿದರು.
ಮಡಿಕೇರಿ ನಗರದಲ್ಲಿ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿರುವ ಕುರಿತು ಪತ್ರಕರ್ತರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದಾಗ ಅವರು ಈ ಸೂಚನೆ ನೀಡಿದರು.
ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ಡಾ.ಮಂತರ್ಗೌಡ, ‘ಕೊಡಗು ಜಿಲ್ಲೆಯಲ್ಲಿ ಎತ್ತರ, ದಿಣ್ಣೆಯ ರಸ್ತೆಗಳು ಇರುವುದರಿಂದ ಒಳಚರಂಡಿಯನ್ನು ಬೇರೆಡೆ ಮಾಡಿದಂತೆ ಆಗುವುದಿಲ್ಲ. ಮಳೆ ಯಥೇಚ್ಛವಾಗಿ ಸುರಿಯುವುದರಿಂದ ಬೇರೆಯೇ ತರಹದ ತಂತ್ರಜ್ಞಾನ ಬಳಕೆ ಮಾಡಬೇಕಿದೆ ಎಂದರು.
ಕುಶಾಲನಗರದಲ್ಲಿ ಹೊಸದಾಗಿ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ನಲ್ಲಿ ಊಟಕ್ಕೆ ಹೆಚ್ಚಿನ ಬೇಡಿಕೆ ಇದೆ. ಈಗ ಮಧ್ಯಾಹ್ನ ಮತ್ತು ರಾತ್ರಿ ತಲಾ 300 ಊಟವನ್ನು ವಿತರಿಸಲಾಗುತ್ತಿದೆ. ಇನ್ನು ಮುಂದೇ ಎರಡೂ ಅವಧಿಯಲ್ಲೂ ತಲಾ 200 ಊಟ ಹೆಚ್ಚು ವಿತರಿಸಲು ಸೂಚಿಸಲಾಗುವುದು ಎಂದು ಸಚಿವ ರಹೀಮ್ ಖಾನ್ ಹೇಳಿದರು.
ಕಳೆದ 25 ವರ್ಷಗಳಿಂದ ಇಲ್ಲಿ ಗುಡ್ಡವೊಂದರ ಮೇಲೆ ಮಡಿಕೇರಿ ನಗರದ ತ್ಯಾಜ್ಯವನ್ನೆಲ್ಲ ಸುರಿಯಲಾಗಿತ್ತು. ಈಗ ಅದರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಯಾವುದೇ ಪಕ್ಷದವರೂ ಇರಲಿ ಚುನಾವಣೆಯಲ್ಲಿ ಮಾತ್ರವೇ ರಾಜಕೀಯ ಮಾಡಿ. ನಂತರ, ಅಭಿವೃದ್ಧಿಯ ಜೊತೆ ಕೈಜೋಡಿಸಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.