ADVERTISEMENT

ಶರಣರ ವಚನ ಸಾರ್ವಕಾಲಿಕ ಶ್ರೇಷ್ಠ ಚಿಂತನೆ

ಹುಣ್ಣಿಮೆ ಪೂಜಾ ಕಾರ್ಯಕ್ರಮ: ಜಮೀರ್ ಅಹಮದ್ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 13:53 IST
Last Updated 12 ಜೂನ್ 2025, 13:53 IST
ಕುಶಾಲನಗರ ಸಮೀಪದ ತೊರೆನೂರು ವಿರಕ್ತ ಮಠದಲ್ಲಿ ಮಾಸಿಕ ಹುಣ್ಣಿಮೆ ಪೂಜಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಚನಗಳಲ್ಲಿ ಜೀವನ ಮೌಲ್ಯ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ವಿರಕ್ತ ಮಠದ ಪೀಠಾಧ್ಯಕ್ಷ ಮಲ್ಲೇಶ ಸ್ವಾಮೀಜಿ ಉದ್ಘಾಟಿಸಿದರು 
ಕುಶಾಲನಗರ ಸಮೀಪದ ತೊರೆನೂರು ವಿರಕ್ತ ಮಠದಲ್ಲಿ ಮಾಸಿಕ ಹುಣ್ಣಿಮೆ ಪೂಜಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಚನಗಳಲ್ಲಿ ಜೀವನ ಮೌಲ್ಯ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ವಿರಕ್ತ ಮಠದ ಪೀಠಾಧ್ಯಕ್ಷ ಮಲ್ಲೇಶ ಸ್ವಾಮೀಜಿ ಉದ್ಘಾಟಿಸಿದರು    

ಕುಶಾಲನಗರ: ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಾರಿದ ಜೀವನ ಮೌಲ್ಯಗಳು ಸಾರ್ವಕಾಲಿಕ ಶ್ರೇಷ್ಠ ಚಿಂತನೆಗಳು ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಜಮೀರ್ ಅಹಮದ್ ಹೇಳಿದರು.

ಸಮೀಪದ ತೊರೆನೂರು ವಿರಕ್ತ ಮಠದಲ್ಲಿ ಮಾಸಿಕ ಹುಣ್ಣಿಮೆ ಪೂಜಾ ಕಾರ್ಯಕ್ರಮದ ಅಂಗವಾಗಿ ಜರುಗಿದ ವಚನಗಳಲ್ಲಿ ಜೀವನ ಮೌಲ್ಯ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

‘ಕಾಯಕ ಮಹತ್ವ, ತ್ರಿವಿಧ ದಾಸೋಹ ಪರಿಕಲ್ಪನೆ, ಸಾಮಾಜಿಕ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ, ವಿಚಾರ ಸ್ವಾತಂತ್ರ್ಯ ಹಾಗೂ ವೈಯುಕ್ತಿಕ ಸ್ವಾತಂತ್ರ್ಯದಲ್ಲಿ ಸ್ತ್ರೀ ಸಮಾನತೆ, ದಯೆ ಮತ್ತು ಧರ್ಮದ ಪರಿಕಲ್ಪನೆ, ಅಸ್ಪೃಶ್ಯತೆ, ಅನುಭಾವ, ಕಲ್ಯಾಣ ಸಮಾಜದ ನಿರ್ಮಾಣ ಮೊದಲಾದ ವೈಶಿಷ್ಟ್ಯಪೂರ್ಣ ಜೀವನ ಮೌಲ್ಯ ಪರಿಕಲ್ಪನೆಗಳನ್ನು ಇಡೀ ಮನುಕುಲಕ್ಕೆ ಸಾರಿದ ಗರಿಮೆ ಈ ನಾಡಿನ ಶರಣರಿಗೆ ಸಲ್ಲುತ್ತದೆ’ ಎಂದು ತಿಳಿಸಿದರು.

ADVERTISEMENT

ಅರಕಲಗೂಡು ಚಿಲುಮೆ ಮಠದ ಸ್ವಾಮೀಜಿ ಜಯದೇವ ಸ್ವಾಮಿ ಆಶೀರ್ವಚನ ನೀಡಿ, ‘ಇಂದಿನ ತಲೆಮಾರಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿಕೊಡುವ ನಿಟ್ಟಿನಲ್ಲಿ ಇಂತಹ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು‌ ನಡೆಯಬೇಕು. ದೇಹದ ಪರಿಕಲ್ಪನೆ ಮತ್ತು ಧರ್ಮದ ಪರಿಕಲ್ಪನೆಯನ್ನು ಪ್ರತಿಯೊಬ್ಬರಿಗೂ ಅರಿವಿಗೆ ಬರುವ ಮೂಲಕ ಆಚರಣೆಗೆ ತರಬೇಕು’ ಎಂದರು.

ತೊರೆನೂರು ವಿರಕ್ತ ಮಠದ ಪೀಠಾಧ್ಯಕ್ಷ ಮಲ್ಲೇಶ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಪ್ರತಿ ತಿಂಗಳ ಹುಣ್ಣಿಮೆ ದಿನದಂದು ಶರಣರ ವಚನಗಳ ಮೌಲ್ಯಗಳನ್ನು ಸಾರುವಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಠದ ವತಿಯಿಂದ ವಚನಗಳ ಕಿರು ಹೊತ್ತಿಗೆ ಮಾಡಿಸಿ ಮನೆ ಮನೆಗಳಿಗೆ ನೀಡುವ ಮೂಲಕ ವಚನಗಳನ್ನು ಎಲ್ಲರೂ ಓದುವ ಹಾಗೆ ಪ್ರೇರೇಪಿಸುವ ಉದ್ದೇಶ ಹೊಂದಿದೆ’ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಕೊಡಗು ಘಟಕದ ಅಧ್ಯಕ್ಷ ಎಚ್.ವಿ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮುಖಂಡರಾದ ಕೆ.ಎಸ್.ಕೃಷ್ಣೇಗೌಡ, ಜಿಲ್ಲಾ ವೀರಶೈವ ಸಮಾಜದ ಕಾರ್ಯದರ್ಶಿಸಾಂಬ ಶಿವಮೂರ್ತಿ, ಖಜಾಂಜಿ ಉದಯ್ ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮಠದ ಭಕ್ತ ಮಂಡಳಿ ಹಾಗೂ ಅಕ್ಕನ ಬಳಗದವರು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.