ಸೋಮವಾರಪೇಟೆ:‘ಇಲ್ಲಿನ ಸೋಮೇಶ್ವರ ದೇವಾಲಯದ ಶ್ರೀ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ಆಯೋಜನೆಗೊಂಡಿರುವ ಶರನ್ನವರಾತ್ರಿ ಉತ್ಸವಕ್ಕೆ ಅ. 15ರಂದು ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡಲಾಗುವುದು’ ಎಂದು ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದರು.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘15ರಿಂದ (ನಾಳೆಯಿಂದ) 24ರವರೆಗೆ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ನಡೆಯಲಿದ್ದು, 15ರಂದು ಬೆಳಿಗ್ಗೆ 7ಕ್ಕೆ ಶ್ರೀದೇವಿ ವಿಗ್ರಹ ಮೆರವಣಿಗೆ ಮೂಲಕ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುವುದು. ಪ್ರತಿದಿನ ಶಕ್ತಿ ಪಾರ್ವತಿಗೆ ಅಭಿಷೇಕ, ಲಲಿತ ಸಹಸ್ರನಾಮ, ಕುಂಕುಮಾರ್ಚನೆ, ರಂಗಪೂಜೆ, ಮಹಮಂಗಳಾರತಿ ನಡೆಯಲಿದೆ. ಇದರೊಂದಿಗೆ ಹೂವು, ಏಲಕ್ಕಿ, ಮುತ್ತಿನ ಅಲಂಕಾರ ನಡೆಯಲಿದ್ದು, 18ಕ್ಕೆ ಕಾವೇರಿ ಮಾತೆ ಅಲಂಕಾರ ಮಾಡಲಾಗುವುದು. ನಂತರ ಮಯೂರವಾಹಿನಿ, ಮಧುರೆ ಮೀನಾಕ್ಷಿ, ವೀಳ್ಯದೆಲೆ, ನಿಂಬೆಹಣ್ಣು, ಅಡಿಕೆ, ಬೆಳ್ಳಿ ಆಭರಣಗಳ ಅಲಂಕಾರದೊಂದಿಗೆ ಪ್ರತಿದಿನ ವಿಶೇಷ ಪೂಜೆ ನೆರವೇರಿಸಲಾಗುವುದು’ ಎಂದು ಮಾಹಿತಿ ನೀಡಿದರು.
‘22ಕ್ಕೆ ದೇವಾಲಯದಲ್ಲಿ ದುರ್ಗಾಹೋಮ, ಪೂರ್ಣಾಹುತಿ, ಅನ್ನಸಂತರ್ಪಣೆ ನಡೆಯಲಿದೆ. 24ಕ್ಕೆ ಬೆಳಿಗ್ಗೆ 10ರಿಂದ 11ರವರೆಗೆ ದೇವಿಗೆ ಸೌಲಕ್ಕಿ ಕಾರ್ಯಕ್ರಮ ನೆರವೇರಲಿದ್ದು, ಮಧ್ಯಾಹ್ನ 2 ಗಂಟೆಗೆ ದೇವಿಯ ವಿಗ್ರಹವನ್ನು ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಆನೆಕೆರೆ ಬಳಿಯಲ್ಲಿ ಬನ್ನಿ ಕಡಿದು ನಂತರ ವಿಸರ್ಜಿಸಲಾಗುವುದು. ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ, ಕಲಾತಂಡಗಳು ಭಾಗವಹಿಸಲಿವೆ’ ಎಂದರು.
ಗೋಷ್ಠಿಯಲ್ಲಿ ದೇವಾಲಯ ಸಮಿತಿ ಕಾರ್ಯದರ್ಶಿ ಎಸ್.ಡಿ. ವಿಜೇತ್, ಖಜಾಂಚಿ ಯಡೂರು ಹರೀಶ್, ನಿರ್ದೇಶಕ ಸತೀಶ್, ರಾಜೇಶ್ ಪದ್ಮನಾಭ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.