ಗೋಣಿಕೊಪ್ಪಲು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹಾಗೂ ಬೆಂಗಳೂರಿನ ಇಸ್ರೊ ಸಂಸ್ಥೆಯ ಉಪ ಕೇಂದ್ರ ಯು.ಆರ್. ರಾವ್ ಉಪಗ್ರಹ ಕೇಂದ್ರ ಮತ್ತು ಕೂರ್ಗ್ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅಂತರಿಕ್ಷ ಆಚರಣೆಯಲ್ಲಿ ವಿದ್ಯಾರ್ಥಿಗಳು ಉಪಗ್ರಹದ ಬಗ್ಗೆ ಹಲವು ಮಾಹಿತಿ ಪಡೆದುಕೊಂಡರು.
‘ಲಿವಿಂಗ್ ಇನ್ ಸ್ಪೇಸ್’ ಘೋಷವಾಕ್ಯದಲ್ಲಿ ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ಅಂತರಿಕ್ಷ ಮತ್ತು ಹವಾಮಾನ ಬದಲಾವಣೆ, ಬಾಹ್ಯಾಕಾಶ ವಿಜ್ಞಾನವು ವಾತಾವರಣ ಸವಾಲುಗಳಿಗೆ ಹೇಗೆ ಪರಿಹಾರ ನೀಡಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಯಿತು.
ವಿಜ್ಞಾನಿಗಳಾಗಲು ಜಾಗೃತಿ, ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿರುವ ಯು ಆರ್ ರಾವ್ ಸ್ಯಾಟಲೈಟ್ ಸೆಂಟರ್ ಮೂಲಕ ಸಂಸ್ಥೆಯ ಉಪಗ್ರಹ ಯಶಸ್ಸಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಭವಿಷ್ಯದ ಬದಲಾವಣೆ, ವಿದ್ಯಾರ್ಥಿಗಳು ವಿಜ್ಞಾನಿಗಳಾಗಿ ಹೊರ ಬರುವಂತೆ ಮಾಡಲು ಪ್ರಯತ್ನ ಮುಂದುವರಿಸಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಹಂಚಿಕೊಂಡರು.
ವಿಜ್ಞಾನಿಗಳಾದ ಕೆ.ಎಸ್.ಸಂಜೀವ್ ಕುಮಾರ್, ರಾಜೇಶ್ವರಿ, ವಿಷ್ಣು ಕಿಶೋರ್ ಪೈ, ರಚನ, ಪ್ರಿಯಾಂಕ, ಪ್ರಸಾದ್, ಕಿರಣ್, ಮಹಾದೇವಸ್ವಾಮಿ, ನವೀನ್ ಕುಮಾರ್, ಪ್ರಶಾಂತ್ ಕುಮಾರ್, ಅಭಿಲಾಶ್ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಬಾಹ್ಯಾಕಾಶದ ಮಾಹಿತಿ ವಿನಿಮಯ ಮಾಡಿಕೊಂಡರು.
ಭೂಮಿಯ ಚಿತ್ರಣ ಮತ್ತು ಖನಿಜ ಸಂಪತ್ತುಗಳ ಮಾಹಿತಿ ತಿಳಿಸುವ ನಾಸಾ ಮತ್ತು ಇಸ್ರೊ ಸಂಸ್ಥೆಗಳ ನಿಸಾರ್ ಉಪಗ್ರಹ, ಜಿಎಸ್ಎಟಿ-11 ಸಂವಹನ ಉಪಗ್ರಹ, ದೂರ ಸಂವೇದಿ ರಿಸೋರ್ಟ್ಟ್-2ಎ, ಸಂವಹನದ ಜಿಎಸ್ಎಟಿ-31, ಭಾರತದ ನಾವಿಕ್ ಉಪಗ್ರಹ ಐಆರ್ಎನ್ಎಸ್ಎಸ್, ಚಂದ್ರಯಾನ್ 2, ಎಂಒಎಂ, ಪಿಎಸ್ಎಲ್ವಿ ಹಾಗೂ ಜಿಎಸ್ಎಲ್ವಿ, ಪಿಎಸ್ಎಲ್ವಿ ರಾಕೆಟ್ ಮಾದರಿಗಳನ್ನು ಸ್ಥಳದಲ್ಲಿಯೇ ಪ್ರದರ್ಶಿಸಲಾಗಿತ್ತು. ಇದರ ಕಾರ್ಯಚಟುವಟಿಕೆ, ಪ್ರಯೋಜನಗಳ ಮಾಹಿತಿ ನೀಡಲಾಯಿತು.
ಕಾಪ್ಸ್ ಹಿರಿಯ ವಿದ್ಯಾರ್ಥಿ ಕೊಳ್ಳಿಮಾಡ ಸೋಮಣ್ಣ ಉದ್ಘಾಟಿಸಿ ಮಾತನಾಡಿ, ವಿಜ್ಞಾನಿಗಳ ಅವಿಷ್ಕಾರ, ದೇಶಕ್ಕೆ ಇಸ್ರೋ ಕೊಡುಗೆ ಅಪಾರ. ವಿದ್ಯಾರ್ಥಿಗಳಿಗೆ ವಿಜ್ಞಾನಿಗಳೊಂದಿಗೆ ಬೆರೆಯಲು ಕಾರ್ಯಕ್ರಮ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ವಿಜ್ಞಾನಿಗಳಾಗಬೇಕು ಎಂದು ಸಲಹೆ ನೀಡಿದರು.
ಕಾಪ್ಸ್ ಕೂರ್ಗ್ ಪಬ್ಲಿಕ್ ಶಾಲೆ ಅಧ್ಯಕ್ಷ ಕೀಕಿರ ಸುಬ್ಬಯ್ಯ ಮಾತನಾಡಿ, ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ವಿಚಾರಗಳನ್ನು ಅರಿತುಕೊಳ್ಳಲು ವಿಜ್ಞಾನಿಗಳ ಪ್ರಯತ್ನ ಪ್ರಯೋಜನವಾಗಲಿದೆ ಎಂದು ಹೇಳಿದರು.
ಕಾಪ್ಸ್ ಟ್ರಸ್ಟಿ ಎಂ.ಡಿ. ನಂಜುಂಡ, ಪ್ರಾಂಶುಪಾಲ ಪ್ರೊ.ಎಂ.ರಾಮಚಂದ್ರನ್, ಕಾಪ್ಸ್ ಖಜಾಂಚಿ ಎಂ.ಟಿ.ಮಾಚಯ್ಯ, ಸ್ಥಾನಿಕ ವ್ಯವಸ್ಥಾಪಕ ಸಿ.ಎಸ್.ಸೊಮಯ್ಯ, ಶೈಕ್ಷಣಿಕ ಕಾರ್ಯಕ್ರಮಗಳ ಸಂಚಾಲಕಿ ಕುಲ್ಲಚಂಡ ಶ್ವೇತಾ ಗಣಪತಿ, ಕಾರ್ಯಕ್ರಮ ಸಂಚಾಲಕಿ ಶಾಂತೆಯಂಡ ಟೀನಾ ಮಾಚಯ್ಯ, ಪಿಆರ್ಒ ಮಾನಸ ತಿಮ್ಮಯ್ಯ ಭಾಗವಹಿಸಿದ್ದರು.
ಸ್ಪರ್ಧೆಗಳ ವಿಜೇತರು ಅಂತರಿಕ್ಷ ವಾರಾ
ಆಚರಣೆ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಎನ್.ಟಿ.ಸಿದ್ಧಾಂತ್ ಬಿ.ಕೆ. ಸಿಂಚನ ಎ.ಎಸ್. ಟಶನ್ ಒಳಗೊಂಡ ಕಳತ್ಮಾಡ್ ಲಯನ್ಸ್ ಶಾಲೆ ಪ್ರಥಮ ಸ್ಥಾನ ಪಡೆಯಿತು.
ಎಚ್.ಪಿ.ಸಾನ್ವಿ ರಸಜ್ಞ ಮಾದಪ್ಪ ಒಳಗೊಂಡಿರುವ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ದ್ವಿತೀಯ ಆರನ್ ಶಂಪುರ್ ಅಂದ್ರಿಯ ಮೆರ್ಲಿ ಮೆನೆಜಸ್ ಒಳಗೊಂಡಿರುವ ಪ್ಲೋಸ್ ಕಾರ್ಮಿಲ್ ಕಾನ್ವೆಂಟ್ ತೃತೀಯ ಎಂ. ಕಹಾನ್ ಬಿ.ಸಿ. ಪರ್ಣಿಕ ಎಚ್.ಡಿ.ಪಂಚಾಕ್ಷರಿ ಒಳಗೊಂಡಿರುವ ನಳಂದ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಎಂ. ಕೆ. ಜಗತ್ ಬೋಪಣ್ಣ ಟಿ.ಟಿ. ತಮನ್ ಸೋಮಯ್ಯ ಎ.ಎಂ. ಸ್ಪಂದನಾ ಒಳಗೊಂಡಿರುವ ರೂಟ್ಸ್ ಸ್ಕೂಲ್ ಪ್ರೋತ್ಸಾಹಕರ ಬಹುಮಾನ ಪಡೆದುಕೊಂಡಿತು.
ಭಾಷಣ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಸೆಂಟ್ ಆಂಥೋನಿ ಶಾಲೆಯ ಸಿ.ಅರ್. ಜಾಗೃತಿ ಬಿಂದು ಪ್ರಥಮ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ವಿವಾನ್ ನಂಜಪ್ಪ ದ್ವಿತೀಯ ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ಎಂ. ಹರಿಕೃಷ್ಣನ್ ತೃತೀಯ ಸೆಂಟ್ ಮೈಕಲ್ ಕಾಲೇಜಿನ ಕೆ. ಪ್ರೀತಿ ಹಾಗೂ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದ ಎಸ್. ಕೆ. ಭವ್ಯ ಪ್ರೋತ್ಸಾಹಕರ ಬಹುಮಾನ ಪಡೆದುಕೊಂಡರು.
ಚಿತ್ರಕಲೆಯಲ್ಲಿ ಮಡಿಕೇರಿ ಜನರಲ್ ಕೆ. ಎಸ್. ತಿಮ್ಮಯ್ಯ ಶಾಲೆಯ ಎಂ. ಎಸ್. ಮೋಹಿತ್ ಪ್ರಥಮ ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ಕೆ. ಯು. ಉನ್ಮಯಿ ತಂಗಮ್ಮ ದ್ವಿತೀಯ ಕ್ಯಾಲ್ಸ್ ಶಾಲೆಯ ಅರಮಣಮಾಡ ದಿಪಾಲಿ ಬೆಳ್ಯಪ್ಪ ತೃತೀಯ ಕೂರ್ಗ್ ಪಬ್ಲಿಕ್ ಶಾಲೆಯ ಅದಿತ್ರಿ ಎಂ. ಸುವರ್ಣ ಸೆಂಟ್ ಥೋಮಸ್ ಶಾಲೆಯ ಅನಾ ಮೇರಿ ಪೊನ್ನಂಪೇಟೆ ಸಾಯಿ ಶಂಕರ್ ಶಾಲೆಯ ವಿ. ಶ್ರಾವ್ಯ ಪ್ರೋತ್ಸಾಹಕರ ಬಹುಮಾನ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.