ಸುಂಟಿಕೊಪ್ಪ: ಇಲ್ಲಿನ ಚರ್ಚ್ನಲ್ಲಿ ಧರ್ಮಕೇಂದ್ರದ ಪಾಲಕ ಸಂತ ಅಂತೋಣಿ ವಾರ್ಷಿಕ ಮಹೋತ್ಸವವು ಭಾನುವಾರ ಶ್ರದ್ಧಾಭಕ್ತಿಯಿಂದ ಮತ್ತು ವಿಜೃಂಭಣೆಯಿಂದ ಆಚರಿಸಾಲಯಿತು.
ಭಾನುವಾರ ಮೈಸೂರು ಕೆಥೋಲಿಕ್ ಧರ್ಮಪ್ರಾಂತದ ಪ್ರೇಷಿತ ಆಡಳಿತಾಧಿಕಾರಿ ಹಾಗೂ ಬೆಂಗಳೂರಿನ ವಿಶ್ರಾಂತ ಮಹಾ ಧರ್ಮಾಧ್ಯಕ್ಷ ಬರ್ನಾಡ್ ಮೋರಸ್ ಅವರನ್ನು ಕನ್ನಡ ವೃತ್ತದಲ್ಲಿ ಧರ್ಮಗುರು ವಿಜಯಕುಮಾರ್ ನೇತೃತ್ವದಲ್ಲಿ ಅಂತೋಣಿ ಚರ್ಚ್ಗೆ ಕರೆ ತರಲಾಯಿತು.
ಸಂಜೆ ಬರ್ನಾಡ್ ಮೋರಸ್ ಅವರು ಸಂತ ಅಂತೋಣಿಯವರ ಹಬ್ಬದ ಆಡಂಬರ ಗಾಯನ, ದಿವ್ಯ ಬಲಿಪೂಜೆ, ದೃಢೀಕರಣ, ಸಂಸ್ಕಾರ ನೆರವೇರಿಸಿಕೊಟ್ಟರು. ದೇವರಲ್ಲಿ ಭಕ್ತಿಯ ಜೋತೆಗೆ ಸಮಾಜದೊಂದಿಗೆ ಬೆರೆತು ಸೇವೆ ಸಲ್ಲಿಸಬೇಕು ಎಂದು ಕ್ರೈಸ್ತರಿಗೆ ಸಲನೆ ನೀಡಿದರು. ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಪಾಲಕ ಸಂತರ ಮೂರ್ತಿಯ ಭವ್ಯ ಮೆರವಣಿಗೆಯು ಗಾಯನ, ಕ್ರೈಸ್ತ ಭಕ್ತರು ಕ್ಯಾಂಡಲ್ ಹಿಡಿದು ಬೈಬಲ್ ಪಠಣ ಮಾಡುತ್ತಾ ಸಾಗಿದರು. ಧರ್ಮಗುರುಗಳಿಂದ ಪರಮ ಪ್ರಸಾದ ಆಶೀರ್ವಾದ ನೆರವೇರಿತು. ಮಧ್ಯಾಹ್ನ 2ರಿಂದ ಬಲಿಪೂಜೆ ವರೆಗೆ ಅಂಬುಕಾಣಿಕೆಯನ್ನು ಏರ್ಪಡಿಸಲಾಯಿತು.
ಗುರುವಾರ ಚಾಲನೆಗೊಂಡ ವಾರ್ಷಿಕೋತ್ಸವವು ಭಾನುವಾರದವರೆಗೆ ನಡೆಯಿತು. ಧರ್ಮಗುರು ಸೆಬಾಸ್ಟಿನ್ ಪೂವತ್ತಿಗಲ್ ಹಾಗೂ ಹಟ್ಟಿಹೊಳೆ, ಮಾದಾಪುರ, ಕುಶಾಲನಗರ, ಮಡಿಕೇರಿ ಚರ್ಚುಗಳ ಧರ್ಮಗಳು ಇದ್ದರು. ಸುಂಟಿಕೊಪ್ಪ, ಕೊಡಗರಹಳ್ಳಿ, ಮಾದಾಪುರ, ಕೆದಕಲ್, ಕಂಬಿಬಾಣೆ, ಕುಶಾಲನಗರ, ಮಡಿಕೇರಿ, ಸೋಮವಾರಪೇಟೆಯ ಈ ಸಮುದಾಯದ ನೂರಾರು ಮಂದಿ ಆಗಮಿಸಿದ್ದರು. ವಿದ್ಯುತ್ ದೀಪ, ಬಂಟಿಂಗ್ಸ್ ಹಾಗೂ ಬಾವುಟಗಳಿಂದ ಅಲಂಕರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.