ಕುಶಾಲನಗರ: ತಾಲ್ಲೂಕಿನ ಕೂಡಿಗೆ ಹಾಗೂ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಹಾಗೂ ಕೂಪ್ ಹಾಡಿಯಲ್ಲಿ ₹50 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.
ಹುದುಗೂರಿನ ಗಂಧದ ಹಾಡಿಗೆ ರಸ್ತೆ ಹಾಗೂ ಗಣೇಶ್ ಮನೆ ಹತ್ತಿರ ₹25 ಲಕ್ಷ ವೆಚ್ಚದಲ್ಲಿ ಮೋರಿ ನಿರ್ಮಾಣ ಕಾಮಗಾರಿ ಹಾಗೂ ₹ 25 ಲಕ್ಷ ವೆಚ್ಚದಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹಳ್ಳದಲ್ಲಿ ಚಿಕ್ಲಿಹೊಳೆ ನಾಲೆಯ ಕಿರು ಸೇತುವೆ ವಿಸ್ತರಣೆ ಹಾಗೂ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅವರು ಚಾಲನೆ ನೀಡಿದರು.
ರಂಗಸಮುದ್ರದಿಂದ ಮಾವಿನಹಳ್ಳಕ್ಕೆ ತೆರಳುವ ಮಾರ್ಗದ ಚಿಕ್ಲಿಹೊಳೆ ಮುಖ್ಯ ನಾಲೆ ಸೇತುವೆ ತಡೆಗೋಡೆ ಕುಸಿದಿರುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಶಾಸಕರ ಗಮನ ಸೆಳೆದರು. ಸೇತುವೆ ಪರಿಶೀಲಿಸಿದ ಶಾಸಕರು, ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದರು. ಉಳಿದಂತೆ ಭೂಮಿಪೂಜೆ ನೆರವೇರಿಸಿದ ಕಾಮಗಾರಿ ಕೂಡಲೇ ಆರಂಭಿಸಿ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ತಹಶೀಲ್ದಾರ್ ಕಿರಣ್ ಗೌರಯ್ಯ, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ, ಉಪಾಧ್ಯಕ್ಷ ಕುಸುಮ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕುಶಾಲನಗರ ಯೋಜನಾ ಪ್ರಾಧಿಕಾರ ಸದಸ್ಯ ವಿ.ಎಸ್.ಸಜಿ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ನಂಜರಾಯಪಟ್ಟಣ, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯರು, ಕಾಂಗ್ರೆಸ್ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.