ನಾಪೋಕ್ಲು: ಜಿಲ್ಲೆಯ ಅತ್ಯಂತ ಎತ್ತರದ ಬೆಟ್ಟ ತಡಿಯಂಡಮೋಳ್ ಬೆಟ್ಟಕ್ಕೆ ಪ್ರವಾಸಿಗರ ಚಾರಣ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
‘ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ಮಾನವ ಪ್ರಾಣ ಹಾನಿ, ಜಾನುವಾರು ಪ್ರಾಣಹಾನಿ, ಮೂಲ ಸೌಕರ್ಯಗಳು ಹಾನಿಯಾಗುವಂತಹ ಪ್ರಕರಣಗಳು ವರದಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಮಳೆಗಾಲ ಪ್ರಾರಂಭವಾಗಿದ್ದು, ಬಿರುಸಿನ ಮಳೆಯಾಗುತ್ತಿರುವುದರಿಂದ ಮಳೆ ಗಾಳಿಯಿಂದಾಗಿ ಅಪಾಯಕಾರಿ ಹಂತದಲ್ಲಿರುವ ಮರದ ಕೊಂಬೆಗಳು ರಸ್ತೆ ಮೇಲೆ ಅಥವಾ ಸಂಚರಿಸುವ ಮಾರ್ಗದಲ್ಲಿ ಮುರಿದು ಬಿದ್ದು ಪ್ರಾಣಾಪಾಯವಾಗುವ ಸಂಭವ ಇದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮುಂಗಾರು ಅವಧಿ ಮುಕ್ತಾಯಗೊಳ್ಳುವವರೆಗೆ ಅರಣ್ಯ ವ್ಯಾಪ್ತಿಯಲ್ಲಿ ಚಾರಣವನ್ನು ನಿಷೇಧಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಮಡಿಕೇರಿ ಪ್ರಾದೇಶಿಕ ವಿಭಾಗ ವ್ಯಾಪ್ತಿಯ ಭಾಗಮಂಡಲ ವಲಯದ ಕಕ್ಕಬೆ ಉಪವಲಯ ವ್ಯಾಪ್ತಿಯಲ್ಲಿ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣ ತೆರಳಲು ಇಲಾಖೆ ಅನುಮತಿ ಪಡೆಯಲು ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಪ್ರಸ್ತುತ ಬೆಟ್ಟದ ಪ್ರದೇಶದಲ್ಲಿ ಅತಿಯಾಗಿ ಮಳೆಯಾಗುತ್ತಿದ್ದು ಮೋಡ ಮತ್ತು ಮಂಜು ಕವಿದುಕೊಂಡಿರುವ ಕಾರಣ ರಸ್ತೆಗಳು ಸರಿಯಾಗಿ ಕಾಣದೆ ಪ್ರವಾಸಿಗರು ದಿಕ್ಕು ತಪ್ಪುವ ಸಾಧ್ಯತೆ ಇದೆ. ಅಲ್ಲವೇ ಕಾಡು ಪ್ರಾಣಿಗಳ ಓಡಾಟ ಕೂಡ ಇರುವುದರಿಂದ ಮಳೆಗಾಲ ಮುಗಿಯುವವರೆಗೆ ಚಾಣಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.