ಮಡಿಕೇರಿ: ಹಸಿರು ಹೊದ್ದ ಬೆಟ್ಟಗಳ ನಡುವೆ ಇರುವ ಕರ್ಣಂಗೇರಿಯ ರಾಜರಾಜೇಶ್ವರಿ ದೇಗುಲದಲ್ಲಿ ಮಂಗಳವಾರ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.
ಬೆಟ್ಟಗಳ ಮಧ್ಯೆ ಭಕ್ತಿಭಾವವೇ ಹರಿದಿತ್ತು. ಸಾವಿರಾರು ಮಂದಿ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದರು.
ಕಳೆದ ಕೆಲವು ದಿನಗಳಿಂದ ವ್ರತಪಾಲನೆ ಮಾಡಿದ್ದ ಪುರುಷರು ರಥವನ್ನು ಎಳೆದರು. ಬಾಲಕಿಯರು ಕಳಸ ಹೊತ್ತರು. ಹರಕೆ ಸೀರೆಗಳಿಂದ ಅಲಂಕಾರ ಮಾಡಿದ ರಥದಲ್ಲಿ ದೇವಿಯ ಮೂರ್ತಿ ಇರಿಸಿ ಪ್ರದಕ್ಷಿಣೆ ಹಾಕಲಾಯಿತು.
ಬೆಳಿಗ್ಗೆ 6 ಗಂಟೆಗೆ ದೇವಾಲಯದಲ್ಲಿ ಧ್ವಜಾರೋಹಣದ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ನಂತರ, ಗಣಪತಿ ಹೋಮ, ದೇವಿಗೆ ಅಭಿಷೇಕ, ಹೂವಿನ ಅಲಂಕಾರ ನಂತರ ತೀರ್ಥ ಸ್ನಾನ ನಡೆಯಿತು. ಕಳಶ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾಮಂಗಳಾರತಿಗಳು ನೆರವೇರಿದವು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ದೇವಾಲಯದ ಅರ್ಚಕ ಗೋವಿಂದ ಸ್ವಾಮಿ ಮಾತನಾಡಿ, ‘ಈ ರಥೋತ್ಸವಕ್ಕೆ ಅನೇಕ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಈ ದೇವಾಲಯದಲ್ಲಿ ಯಾವುದೇ ರೀತಿಯ ಹರಕೆ ಮಾಡಿಕೊಂಡು ಹೋದರೆ ವರ್ಷ ತುಂಬುವ ವೇಳೆಯಲ್ಲಿ ಭಕ್ತರ ಕೋರಿಕೆಯನ್ನು ದೇವಿ ನೆರವೇರಿಸುತ್ತಾಳೆ ಎನ್ನುವ ನಂಬಿಕೆಯಿಂದ ಸಾಕಷ್ಟು ಭಕ್ತರು ಜಿಲ್ಲೆ ಅಲ್ಲದೇ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ವರ್ಷಕ್ಕೆ ಒಮ್ಮೆ ಬಂದು ದೇವಿ ರಥೋತ್ಸವ ಕಾರ್ಯದಲ್ಲಿ ಭಾಗಿಯಾಗುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.