ಕುಶಾಲನಗರ/ಕೊಣನೂರು: ಕೌಟುಂಬಿಕ ಕಲಹದಿಂದ ಬೇಸತ್ತ ಕಾರ್ಮಿಕ ಮಹಿಳೆಯೊಬ್ಬರು, ಮೂವರು ಮಕ್ಕಳೊಂದಿಗೆ ಹಾರಂಗಿ ನಾಲೆಗೆ ಹಾರಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರಿನ ಅರಗಲ್ಲು ಎಂಬಲ್ಲಿ ಈ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯಿಂದ ಬಂದಿದ್ದ ಚೆನ್ನಮ್ಮ (28) ಹಾಗೂ ಮಕ್ಕಳಾದ ವಿಜಯ್ (6), ವಿನಯ್ (4) ಹಾಗೂ ದೀಕ್ಷಾ (3) ಮೃತಪಟ್ಟವರು.
ದೇವರಾಜು ಹಾಗೂ ಚೆನ್ನಮ್ಮ ದಂಪತಿ, 15 ದಿನಗಳ ಹಿಂದೆ ಕುಟುಂಬ ಸಮೇತರಾಗಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರಕ್ಕೆ ಶುಂಠಿ ಕೀಳುವ ಕೆಲಸಕ್ಕಾಗಿ, ಸ್ನೇಹಿತರು ಮತ್ತು ನೆಂಟರ ಜೊತೆಗೆ ಬಂದಿದ್ದರು. ಪತಿ ದೇವರಾಜು ಮದ್ಯಪಾನ ಮಾಡಿ ನಿತ್ಯ ಟೆಂಟ್ನಲ್ಲಿ ಪತ್ನಿಯೊಂದಿಗೆ ಗಲಾಟೆ ನಡೆಸುತ್ತಿದ್ದರು. ಗುರುವಾರ ರಾತ್ರಿಯೂ ಜಗಳ ನಡೆದಿದೆ. ಶುಕ್ರವಾರ ಎಲ್ಲರೂ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕುಶಾಲನಗರ ಪಕ್ಕವಿರುವ ಹೆಬ್ಬಾಲೆ ಗ್ರಾಮದ ನಾಲೆಗೆ ಮಕ್ಕಳನ್ನು ತಳ್ಳಿ, ಚೆನ್ನಮ್ಮನೂ ನಾಲೆಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ನಾಲೆಯಲ್ಲಿ ಮಕ್ಕಳ ಮೃತದೇಹ ತೇಲಿಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಬೆಳಿಗ್ಗೆಯೇ ಮೂವರು ಮಕ್ಕಳ ಮೃತದೇಹ ಸಿಕ್ಕಿದ್ದವು. ಬಳಿಕ ಹಾರಂಗಿ ನಾಲೆಯಲ್ಲಿ ನೀರು ಸ್ಥಗಿತಗೊಳಿಸಿ ಶನಿವಾರ ಸಂಜೆ ವೇಳೆಗೆ ಚೆನ್ನಮ್ಮ ಮೃತದೇಹವನ್ನೂ ಪತ್ತೆಹಚ್ಚಲಾಯಿತು. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.