
ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ಶ್ರೀಮಂಗಲ ಬಳಿಯ ಕುರ್ಚಿ ಗ್ರಾಮದ ಅಜ್ಜಮಾಡ ಮೇದಪ್ಪ ಅವರ ಹಸುವನ್ನು ಗುರುವಾರ ಮಧ್ಯಾಹ್ನ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಮೇದಪ್ಪ, ಹಸುವನ್ನು ಮೇಯಲೆಂದು ಗದ್ದೆಗೆ ಕಟ್ಟಿ ಹಾಕಿದ್ದರು. ಕಾಫಿ ತೋಟದ ಒಳಗೆ ನುಸುಳಿಬಂದ ಹುಲಿ ಹಸುವಿನ ಕುತ್ತಿಗೆಗೆ ಕಚ್ಚಿ ಸಾಯಿಸಿದೆ. ಮೇದಪ್ಪ ಸಂಜೆ ಹಸುವನ್ನು ಕೊಟ್ಟಿಗೆ ತರಲು ಹೋದಾಗ ಘಟನೆ ಗೋಚರಿಸಿದೆ. ಹಸು ಗರ್ಭ ಧರಿಸಿದ್ದು, ಕೆಲವೇ ದಿನಗಳಲ್ಲಿ ಕರು ಹಾಕುತ್ತಿತ್ತು ಎಂದು ಮೇದಪ್ಪ ಅಳಲು ತೋಡಿಕೊಂಡರು.
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದಾಗ ಅವರೊಂದಿಗೆ ವಾಗ್ವಾದಕ್ಕಿಳಿದ ಮೇದಪ್ಪ, ‘ಹಂದಿ, ಆನೆ ಹುಲಿ ಕಾಟದಿಂದ ಬುದುಕುವುದೇ ಕಷ್ಟವಾಗಿದೆ. ಗದ್ದೆಯಲ್ಲಿ 60 ಬಟ್ಟಿ (ಚೀಲ) ಭತ್ತ ಬೆಳೆಯಲಾಗುತ್ತಿತ್ತು. ಅದೆಲ್ಲವನ್ನು ಖಾಲಿ ಬಿಡಲಾಗಿದೆ. ಇದರಿಂದ ಹುಲಿ ಗದ್ದೆಯಲ್ಲಿಯೇ ಸುಳಿದಾಡುತ್ತಿರುತ್ತದೆ. ನಾವು ಬದುಕುವುದಾದರೂ ಹೇಗೆ’ ಎಂದು ನೋವು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.