ಮಡಿಕೇರಿ: ‘ಟಿಪ್ಪು ಜಯಂತಿಯನ್ನು ವಿನಾಕಾರಣ ವಿರೋಧಿಸಿ ಸಮಾಜದ ನೆಮ್ಮದಿ ಕೆಡಿಸುವುದು ಸರಿಯಲ್ಲ. ಜಯಂತಿ ಆಚರಣೆ ವಿಚಾರದಲ್ಲಿ ವಿಧಾನಸಭೆಯಲ್ಲೇ ಚರ್ಚಿಸಿ ಬಹುಮತದ ಆಧಾರದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್ ಮುಖಂಡ ಎಂ.ಸಿ. ನಾಣಯ್ಯ ಸಲಹೆ ನೀಡಿದರು.
ನಗರದಲ್ಲಿ ಮಂಗಳವಾರ ಲೇಖಕ ಮೂಕೊಂಡ ನಿತಿನ್ ಕುಶಾಲಪ್ಪ ಅವರ ‘ಕೊಡಗು ಪ್ರಿನ್ಸಿಪಾಲಿಟಿ ವರ್ಸಸ್ ಬ್ರಿಟಿಷ್ ಎಂಪೈರ್’ ಹಾಗೂ ‘1785 ಕೂರ್ಗ್’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಕೊಡವ ಜನಾಂಗದ ಭಾವನೆ ಅರ್ಥೈಸಿಕೊಂಡು ಸರ್ಕಾರದ ಹಂತದಲ್ಲಿಯೇ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಎಲ್ಲಿಯೂ ರಾಜರ ಜಯಂತಿಗಳು ನಡೆಯುತ್ತಿಲ್ಲ. ಹೀಗಾಗಿ, ಟಿಪ್ಪು ಜಯಂತಿ ವಿಚಾರದಲ್ಲಿ ಸುದೀರ್ಘ ಚರ್ಚೆಯಾಗಬೇಕು. ಒಂದುವೇಳೆ ಈ ಜಯಂತಿ ಆಚರಿಸುವುದೇ ಬೇಡ ಎಂದಾದಲ್ಲಿ ಕೊಡಗಿನಲ್ಲಿ ಗೊಂದಲವೇ ಸೃಷ್ಟಿ ಆಗುವುದಿಲ್ಲ’ ಎಂದು ಹೇಳಿದರು.
‘ಟಿಪ್ಪು ಜಯಂತಿಯನ್ನು ಕೆಲವರು ರಾಜಕೀಯಕ್ಕೆ ಬಳಸಿಕೊಂಡು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೊಡಗಿನಲ್ಲಿ ಅಮಾಯಕರನ್ನು ಬಳಸಿಕೊಂಡು ಪ್ರತಿಭಟನೆ ನಡೆಸುವುದೂ ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪುಸ್ತಕ ನಿಷೇಧ ಸರಿಯಲ್ಲ: ‘ಟಿಪ್ಪು ಕುರಿತು ಬರೆದಿರುವ ಕೃತಿಗಳನ್ನು ಜನರು ಓದಬೇಕು. ಆ ಪುಸ್ತಕಗಳನ್ನು ನಿಷೇಧಿಸುವ ಕ್ರಮ ಸರಿಯಲ್ಲ. ಕೃತಿ ಓದಿ ಅರ್ಥೈಸಿದ ಬಳಿಕ ತಪ್ಪು ಒಪ್ಪುಗಳ ಚರ್ಚೆ ನಡೆಯಲಿ’ ಎಂದು ಸಲಹೆ ನೀಡಿದರು.
ಲೇಖಕ ಮೂಕೊಂಡ ನಿತಿನ್ ಕುಶಾಲಪ್ಪ, ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.