ಸೋಮವಾರಪೇಟೆ: ಇಲ್ಲಿನ ಜೂನಿಯರ್ ಕಾಲೇಜಿನ ಮೈದಾನಕ್ಕೆ ಅಳವಡಿಸಿರುವ ಟರ್ಫ್ ಮೈದಾನದ ಬುಡವೇ ಅಲುಗಾಡುತ್ತಿದೆ.
ತಾಲ್ಲೂಕಿನ ಸಾಕಷ್ಟು ಹಾಕಿ ಪ್ರೇಮಿಗಳ ಬೇಡಿಕೆಯಂತೆ ಅಂದು ಶಾಸಕರಾಗಿದ್ದ ಅಪ್ಪಚ್ಚುರಂಜನ್ ಶಾಸಕರ ಅವಧಿಯ 2012ರಲ್ಲಿ ಸಿಂಥೆಟಿಕ್ ಟರ್ಫ್ ಹಾಕಿ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಸಿಕ್ಕಿತ್ತು. ಅಗಲೇ ₹ 3.50ಕೋಟಿ ಅಂದಾಜುಪಟ್ಟಿ ಸಿದ್ಧವಾಗಿದ್ದರೂ, ಕಾರಣಾಂತರದಿಂದ ಕಾಮಗಾರಿ ಪ್ರಾರಂಭವಾಗಲಿಲ್ಲ.
2016ರಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ನೂತನ ಯೋಜನೆಯಂತೆ ₹ 4.15ಕೋಟಿ ಅನುದಾನ ಕಲ್ಪಿಸಿ, ಹೈದರಾಬಾದ್ ಮೂಲದ ಕಂಪೆನಿಯೊಂದು ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿಯನ್ನು ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಸ್ತುವಾರಿ ವಹಿಸಿಕೊಂಡಿತು. 2020ರ ಡಿಸೆಂಬರ್ನಲ್ಲಿ ಕಾಮಗಾರಿ ಪ್ರಾರಂಭಗೊಂಡರೂ, ಆಮೆ ವೇಗದಲ್ಲಿ ನಡೆಯಿತು. ಅಲ್ಲದೆ, ತಡೆಗೋಡೆ ನಿರ್ಮಾಣಕ್ಕೆ ಮತ್ತೊಮ್ಮೆ ₹ 45 ಲಕ್ಷ ನೀಡಲಾಗಿದೆ.
ಸ್ಟೇಡಿಯಂ ಕೆಳಭಾಗದಲ್ಲಿ ಹಲವು ನಿವಾಸಿಗಳಿದ್ದು, ತಡೆಗೋಡೆ ಕುಸಿದಲ್ಲಿ ಸಮಸ್ಯೆಯಾಗುವುದು. ಮೈದಾನಕ್ಕೆ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಮತ್ತು ಟಾರ್ಪಲ್ ಹೊದಿಸಲಾಗಿದ್ದು, ತಾತ್ಕಾಲಿಕ ಕ್ರಮ ತೆಗೆದುಕೊಳ್ಳಳಾಗಿದೆ.
ಕಳಪೆ ಕಾಮಗಾರಿ ಕುರಿತು ಲೋಕಾಯುಕ್ತಕ್ಕೆ ದೂರು
ಕಳಪೆ ಕಾಮಗಾರಿ ಕುರಿತು ಕ್ರೀಡಾಪ್ರೇಮಿಗಳು ಹಾಗೂ ಸ್ಥಳೀಯರು ಹಲವಾರು ಆಕ್ಷೇಪ ವ್ಯಕ್ತಪಡಿಸಿದ್ದು, ಅದೂ ಅಲ್ಲದೇ ಲೋಕಾಯುಕ್ತಕ್ಕೆ ದೂರನ್ನೂ ಕೂಡ ನೀಡಲಾಗಿತ್ತು. ನಂತರ, ಹಲವು ಬಾರಿ ಕಾಮಗಾರಿಗೆ ವಿಘ್ನ ಎದುರಾಗಿತ್ತು. ಅಂತಿಮವಾಗಿ 2023ರಲ್ಲಿ ಸೋಮವಾರಪೇಟೆಯಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾಟಕ್ಕೆ ಮೈದಾನವನ್ನು ಸಜ್ಜುಗೊಳಿಸಬೇಕಾದ ಸಂದರ್ಭದಲ್ಲಿ ಟರ್ಫ್ ಕ್ರೀಡಾಂಗಣಕ್ಕೆ ಚಾಲನೆ ನೀಡಲಾಗಿತ್ತು.
ಸಾಕಷ್ಟು ಪರ ವಿರೋಧದ ನಡುವೆ ಇಲ್ಲಿ ಟರ್ಫ್ ಕಾಮಗಾರಿ ಮಾಡಲಾಗಿದೆ. ಕೆಲವರು ಈ ಮೈದಾನ ಟರ್ಫ್ ಅಳವಡಿಸಲು ಸೂಕ್ತ ಸ್ಥಳದ ಕೊರತೆ ಇದೆ, ಅದಕ್ಕಾಗಿ ಬಳಗುಂದ ಸರ್ಕಾರಿ ಶಾಲಾ ಮೈದಾನದಲ್ಲಿ ಟರ್ಫ್ ಕ್ರೀಡಾಂಗಣವನ್ನು ನಿರ್ಮಿಸಲು ಮನವಿ ಮಾಡಿದ್ದರು. ಕೆಲವರು ಇಲ್ಲಿಯೇ ನಿರ್ಮಿಸುವಂತೆ ಒತ್ತಾಯಿಸಿ, ಸಫಲರಾಗಿದ್ದರು.ಇಲ್ಲಿನ ನಿರ್ಮಾಣವಾದ ಮೈದಾನದಿಂದ ಹಾಕಿಗೆ ಮಾತ್ರ ಸೀಮಿತವಾಗಿದ್ದರಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟಗಳು, ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಗಳು ಅವಕಾಶ ಕಳೆದುಕೊಂಡಿದೆ. ಅತ್ಯಂತ ಇಕ್ಕಟ್ಟಿನ ಸ್ಥಳದಲ್ಲಿ ಅಳತೆ ಕಡಿಮೆಯಿರುವ ಕುರಿತು ಕ್ರೀಡಾ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಒಂದು ಕ್ರೀಡೆಗಾಗಿ 3 ಕ್ರೀಡೆಗಳನ್ನು ಸ್ಥಳವಿಲ್ಲದೇ, ಸುಮಾರು 80ಕ್ಕೂ ಅಧಿಕ ವರ್ಷಗಳಿಂದ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಕ್ರೀಡೆಗಳನ್ನು ಆಯೋಜಿಸಿದ್ದ ಕ್ರೀಡಾಂಗಣದಲ್ಲಿ ಪ್ರಸ್ತುತ ಯಾವುದೇ ಕ್ರೀಡಾಕೂಟಗಳು ಕೂಡ ನಡೆಸದಂತಾಗಿರುವುದು ವಿಷಾದನೀಯ ಎಂದು ಕ್ರೀಡಾ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ತಮ್ಮ ಅವಧಿಯಲ್ಲಿ ಆಗಿದ್ದ ಟರ್ಫ್ ಕ್ರೀಡಾಂಗಣದ ತಡೆಗೋಡೆ ಕುಸಿದಿರುವ ಕುರಿತು ಮಾಜಿ ಸಚಿವ ಅಪ್ಪಚ್ಚುರಂಜನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ತಡೆಗೋಡೆಯನ್ನು ನಿರ್ಮಿಸಿಕೊಡಬೇಕೆಂದು ಗುತ್ತಿಗೆದಾರರಿಗೆ ಒತ್ತಾಯಿಸುವುದಾಗಿ ಹೇಳಿದ್ದಾರೆ.
ಮಳೆಯ ತೀವ್ರತೆ ಕಡಿಮೆಯಾದ ನಂತರ ಅದೇ ಗುತ್ತಿಗೆದಾರನಿಂದ ಕಾಮಗಾರಿಯನ್ನು ಅವರದೇ ಸ್ವಂತ ವೆಚ್ಚದಲ್ಲಿ ಪುನರ್ ನಿರ್ಮಿಸಿಕೊಡುವಂತೆ ಸೂಚನೆ ನೀಡಲಾಗಿದೆ. ಡಾ.ಮಂತರ್ಗೌಡ ಶಾಸಕ.
ಈ ಕುರಿತು ಶಾಸಕರು ಹಾಗೂ ಇಲಾಖೆಯ ಆಯುಕ್ತರ ಗಮನಕ್ಕೆ ತಂದಿರುತ್ತೇನೆ. ಮಳೆಯ ತೀವ್ರತೆ ಹೆಚ್ಚಿರುವುದರಿಂದ ಮಳೆ ಕಡಿಮೆಯಾದ ನಂತರ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ವಿ.ಟಿ.ವಿಸ್ಮಯಿ ಸಹಾಯಕ ನಿರ್ದೇಶಕರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಗುತ್ತಿಗೆದಾರರಿಂದಲೇ ತಡೆಗೋಡೆ ಕಾಮಗಾರಿಯನ್ನು ಹೊಸದಾಗಿ ನಿರ್ಮಿಸಲಾಗುವುದು. ಸೆಪ್ಟೆಂಬರ್ನಲ್ಲಿ ಅದರ ಹಿಂದೆಯೇ ಹೊಸದಾಗಿ ತಡೆಗೋಡೆ ಕಾಮಗಾರಿ ಆರಂಭಿಸಲಾಗುವುದು. ನಿತ್ಯ ಇಲಾಖೆಯ ಸಿಬ್ಬಂದಿ ಈ ಕುರಿತು ಗಮನಿಸುತ್ತಿದ್ದಾರೆ. ಕುಮಾರಸ್ವಾಮಿ ಎಇಇ ಸಣ್ಣನೀರಾವರಿ ಇಲಾಖೆ ಮಡಿಕೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.