ADVERTISEMENT

‌ಝಂಡಾ ಬದಲಾಗಬಹುದು, ಅಜೆಂಡಾ ಬದಲಾಗದು– ವಿಶ್ವನಾಥ್

ಅವಕಾಶ, ಒತ್ತಾಯ ಬಂದರೆ ಕಾಂಗ್ರೆಸ್‌ಗೆ ಹೋಗುವೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 6:06 IST
Last Updated 2 ಸೆಪ್ಟೆಂಬರ್ 2022, 6:06 IST

ಮಡಿಕೇರಿ: ‘ಝಂಡಾ (ಬಾವುಟ) ಬದಲಾಗಬಹುದು. ಆದರೆ, ನನ್ನ ಅಜೆಂಡಾ ಎಂದಿಗೂ ಬದಲಾಗದು’ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ತಿಳಿಸಿದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ನಾನು ಮೊದಲಿನಿಂದಲೂ ಕಾಂಗ್ರೆಸ್ ಕಾರ್ಯಕರ್ತರಾಗಿದ್ದೆವು. ಅವರ ಜೊತೆ ಹುಣಸೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ಊಟ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ’ ಎಂದು ಇಲ್ಲಿ ಗುರುವಾರ ಸುದ್ದಿಗಾರರಿಗೆ ಹೇಳಿದರು.

‘ವಿಶ್ವನಾಥ್ ಮುಂದಿನ ನಡೆ ಕಾಂಗ್ರೆಸ್ ಕಡೆಗಾ’ ಎಂಬ ಪ್ರಶ್ನೆಗೆ ಅವರು ನಗುತ್ತಲೇ ಪ್ರತಿಕ್ರಿಯಿಸಿ, ‘ಯಾರಿಗೆ ಗೊತ್ತು ಸಂಜೆ ವೇಳೆಗೆ ಮಳೆ ಬಂದು ವಾತಾವರಣವೇ ಬದಲಾಗಬಹುದು. ಒತ್ತಾಯ ಬಂದರೆ ಕಾಂಗ್ರೆಸ್‌ಗೂ ಹೋಗಬಹುದು. ಹೀಗೇ ಆಗಬೇಕು, ಹಾಗೇ ಆಗಬೇಕು ಎಂಬ ನಿರ್ಣಯಗಳು ರಾಜಕಾರಣದಲ್ಲಿಲ್ಲ. ಮತಕ್ಕಾಗಿ ಏನನ್ನಾರೂ ಮಾಡಬಹುದು ಎಂಬಂತಾಗಿದೆ’ ಎಂದರು.

ADVERTISEMENT

‘ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಕ್ಕೆ ಸದ್ಯ ಸಿದ್ಧತೆಗಳು ನಡೆದಿಲ್ಲ. ಅವಕಾಶ, ಒತ್ತಾಯಗಳು ಬಂದರೆ ಹೋಗುವೆ. ಅದರಲ್ಲಿ ವಿಶೇಷ ಏನಿದೆ’ ಎಂದು ಪ್ರಶ್ನಿಸಿದರು.

‘ಜಾತ್ಯಾತೀತ ಶಕ್ತಿಗಳನ್ನು ಒಗ್ಗೂಡಿಸಿ ಬಡವರ ಪರ ಕೆಲಸ ಮಾಡುವುದು ನನ್ನ ಅಜೆಂಡಾ. ಇದು ಎಂದಿಗೂ ಬದಲಾಗದು’ ಎಂದರು.

‘ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ಬೇಕು’ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.